ಸರಗೂರು ತಾಲ್ಲೂಕು ಸಾಗರೆ ಮಾರಮ್ಮ ದೇವಸ್ಥಾನದ ಹೊರ ನೋಟ
ಸರಗೂರು: ತಾಲ್ಲೂಕಿನ ಸಾಗರೆ ಮಾರಮ್ಮ ಜಾತ್ರೆ ಹಾಗೂ ಕೊಂಡ ಮಹೋತ್ಸವ ಮಾ.25ರಂದು (ಮಂಗಳವಾರ) ಜರಗುಲಿದ್ದು, ಸಿದ್ಧತೆ ಭರಪೂರವಾಗಿ ನಡೆದಿದೆ.
ಜಾತ್ರೋತ್ಸವಕ್ಕೆ ಪಟ್ಟಣ, ದೇಗುಲಗಳು ವಿದ್ಯುತ್ ದೀಪಾಲಂಕಾರ, ಸುಣ್ಣ ಬಣ್ಣಗಳಿಂದ ಸಿಂಗಾರಗೊಂಡಿದೆ.
ಕೊಂಡೋತ್ಸವಕ್ಕೆ ಕೊಂಡ ಬೇಯಿಸಲು ಕಗ್ಗಲಿ ಸೌದೆಯನ್ನು ಎತ್ತಿನ ಗಾಡಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಅಮ್ಮನವರ ಸನ್ನಿಧಾನಕ್ಕೆ ತರುವುದು ವಾಡಿಕೆ.
ಮಧ್ಯಾಹ್ನ 12ಕ್ಕೆ ಕಪಿಲಾ ನದಿಯಲ್ಲಿ ಪೂಜೆ ಸಲ್ಲಿಸಿ ಅಮ್ಮನವರ ವಿಗ್ರಹ ತರಲಾಗುತ್ತದೆ. 1.30ಕ್ಕೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವಾದ್ಯಗೋಷ್ಠಿಯೊಂದಿಗೆ ತೆರಳಿ ಅಮ್ಮನವರಿಗೆ ಅಲಂಕಾರ ಮಾಡಲು ಹೂವು, ಹೊಂಬಾಳೆ ತರಲಾಗುವುದು.
2 ಘಂಟೆಗೆ ಅಮ್ಮನವರ ಸನ್ನಿಧಿಯಿಂದ ಮಂಗಳವಾದ್ಯದೊಂದಿಗೆ ಹೊರಟು ಸಾಗರೆ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಸಂಜೆ 4.30 ಘಂಟೆಗೆ ದೇವಸ್ಥಾನದ ಅರ್ಚಕರ ಮನೆಯಿಂದ ಅಮ್ಮನವರ ಸನ್ನಿಧಿಗೆ ಮಡೆ ಅನ್ನ ತರಲಾಗುವುದು. ನಂತರ ಭಕ್ತರು ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಹಾಗೂ ವೀರಮಕ್ಕಳು ಕೊಂಡ ತುಳಿಯುವರು.
ಸಂಜೆ 4.45ಕ್ಕೆ ಮಾರಮ್ಮನವರ ಮುಂದೆ ಎಳನೀರಿನಲ್ಲಿ ಹಸಿಬಾಳೆ ನಾರು ಹಾಕಿ ದೀಪ ಹಚ್ಚಿ ಜ್ಯೋತಿ ಬೆಳಗಿಸುವುದು. ಈ ಜ್ಯೋತಿ ನೋಡಲು ರಾಜ್ಯದ ನಾನಾ ಕಡೆಯಿಂದ ಸಾವಿರಾರು ಭಕ್ತರು ಆಗಮಿಸುವರು.
ಚಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸರಗೂರು, ಹ್ಯಾಂಡ್ ಪೋಸ್ಟ್, ಎಚ್.ಡಿ.ಕೋಟೆಯಿಂದ ಸಾಗರೆ ಗ್ರಾಮಕ್ಕೆ ಸಾರಿಗೆ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.