ADVERTISEMENT

ಸರ್ವಜ್ಞನ ವಿಚಾರಧಾರೆ ಪಾಲಿಸಿದರೆ ಒಳ್ಳೆಯ ಬದುಕು: ವಿಧಾನಪರಿಷತ್‌ ಸದಸ್ಯ ಮಂಜೇಗೌಡ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 12:22 IST
Last Updated 20 ಫೆಬ್ರುವರಿ 2026, 12:22 IST
<div class="paragraphs"><p>ಸರ್ವಜ್ಞ ಜಯಂತಿ ಕಾರ್ಯಕ್ರಮ</p></div>

ಸರ್ವಜ್ಞ ಜಯಂತಿ ಕಾರ್ಯಕ್ರಮ

   

ಮೈಸೂರು: ‘ಸಂತ ಕವಿ ಸರ್ವಜ್ಞರ ವಿಚಾರಧಾರೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡರೆ ಒಳ್ಳೆಯ ವ್ಯಕ್ತಿಯಾಗಿ ಜೀವನ ನಡೆಸಬಹುದು’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಇಲ್ಲಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ಸರ್ವಜ್ಞ ಎಂದರೆ ಎಲ್ಲವನ್ನೂ ತಿಳಿದವರು. ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತ್ರಿಪದಿಯನ್ನು ಅವರು ರಚಿಸಿದ್ದಾರೆ. ಧರ್ಮ, ನ್ಯಾಯ, ಸಂಸ್ಕೃತಿ ಹಾಗೂ ವಿದ್ಯೆಯ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಮುಂದಿನ ಪೀಳಿಗೆಗೂ ಅವರನ್ನು ತಿಳಿಸಬೇಕಾದ ಅಗತ್ಯವಿದೆ’ ಎಂದರು.

‘ನಗರದ ಬಡಾವಣೆ ಹಾಗೂ ವೃತ್ತಕ್ಕೆ ಸರ್ವಜ್ಞರಂತಹ ಮಹನೀಯರ ಹೆಸರಿಡಬೇಕು’ ಎಂದು ಹೇಳಿದರು.

ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಧುಸೂಧನ್. ಕೆ.ಎಸ್. ಮಾತನಾಡಿ, ‘ಪ್ರಪಂಚದಲ್ಲಿ ಪ್ರತಿ ನಿತ್ಯ ಸಾಕಷ್ಟು ಜನ ಆಗಿಹೋಗುತ್ತಾರೆ. ಆದರೆ, ಬೆರಳಣಿಕೆಯಷ್ಟು ಜನರನ್ನು ಮಾತ್ರವೇ ನೆನಪಿಸಿಕೊಳ್ಳುತ್ತೇವೆ. ತಲೆಮಾರುಗಳಿಂದಲೂ ನೆನಪಿಸಿಕೊಳ್ಳುತ್ತಾ ಬಂದಿರುವ ಮಹನೀಯರಲ್ಲಿ ಸರ್ವಜ್ಞ ಒಬ್ಬರು’ ಎಂದರು.

‘ಅವರ ತ್ರಿಪದಿಯ ಸಾಲುಗಳನ್ನು ಅಳವಡಿಸಿಕೊಂಡರೆ ಬಾಳು ಬಂಗಾರವಾಗುವುದರಲ್ಲಿ ಎರಡು ಮಾತುಗಳಿಲ್ಲ. ನಾವೀಗ ತಂತ್ರಜ್ಞಾನದ ಕಾಲಘಟ್ಟದಲ್ಲಿದ್ದರೂ, ಸರ್ವಜ್ಞರ ರಚನೆಯಲ್ಲಿ ಭವಿಷ್ಯಕ್ಕೆ ಬೇಕಾಗುವ ಹಲವು ವಿಷಯಗಳಿವೆ’ ಎಂದು ಹೇಳಿದರು.

ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಎಚ್.ಎಸ್. ಪ್ರಕಾಶ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಮುಖಂಡರಾದ ಕೆ.ಪಿ. ವೆಂಕಟೇಶ್, ಬಾಲಕೃಷ್ಣ, ಗೌರಿ ಶೆಟ್ಟಿ, ವಾಸು, ಮಂಜುನಾಥ್, ಯಮುನಾ ನಾಗರಾಜ್, ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.