
ಮೈಸೂರು: ದೇಶದ ಕ್ಷೀರ ಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ ಹೇಗೆ ಎಮ್ಮೆ ಹಾಲಿನ ಸಂಗ್ರಹ, ಸುರಕ್ಷಿತ ವಿಲೇವಾರಿಗೆ ಅಗತ್ಯವಾದ ಪ್ಲಾಸ್ಟಿಕ್ ಕವರ್ನ ಬಳಕೆಯನ್ನು ತಂದರು ಮತ್ತು ಅದು ಹೇಗೆ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತು ಎಂಬುದನ್ನು ವಿವರಿಸಿದ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಎಲ್.ಎಸ್. ಶಶಿಧರ ಅವರು, ಸಣ್ಣ ವೈಜ್ಞಾನಿಕ ಆವಿಷ್ಕಾರಗಳೂ ಭಾರತವನ್ನು ಸ್ವಾವಲಂಬಿಯಾಗಿಸಿದ ಕಥೆಗಳನ್ನು ತೆರೆದಿಟ್ಟರು.
ಇಲ್ಲಿನ ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ಕಲಾಸುರುಚಿ, ಕುತೂಹಲಿ–ಕನ್ನಡ ಬಳಗದಿಂದ ಶನಿವಾರ ಆಯೋಜಿಸಿದ್ದ ‘ಸೈನ್ಸ್ ಸಂಜೆ’ ಕಾರ್ಯಕ್ರಮದಲ್ಲಿ ‘ಸ್ವತಂತ್ರ ಭಾರತದಲ್ಲಿ ವಿಜ್ಞಾನ– ಕೇಳದ ಕಥೆಗಳು, ಅನೂಹ್ಯ ಪ್ರಭಾವ’ ಕುರಿತು ಮಾತನಾಡಿದರು.
ತತ್ಕ್ಷಣದ ಅಗತ್ಯಗಳಿಗಾಗಿ ಕಂಡುಕೊಂಡ ಕೆಲ ವೈಜ್ಞಾನಿಕ ಸಂಶೋಧನೆಗಳು ಹಾಗೂ ದೇಶದ ತುರ್ತಿನ ಸ್ಥಿತಿಯಲ್ಲಿ ವಿಜ್ಞಾನಿಗಳು ಕೈಗೊಂಡ ಸಣ್ಣ ನಿರ್ಧಾರಗಳು ಉಂಟುಮಾಡಿದ ದೊಡ್ಡ ಪ್ರಭಾವಗಳನ್ನು, ಸನ್ನಿವೇಶಗಳ ಸಹಿತ ವಿವರಿಸಿದರು.
‘ಆಹಾರಕ್ಕಾಗಿ ದೇಶ ಪರದಾಡುತ್ತಿದ್ದಾಗ ಕ್ಷೀರ ಕ್ರಾಂತಿ ಉಂಟು ಮಾಡಿದ ಪ್ರಯೋಜನಗಳನ್ನೂ ಯಾರು ಮರೆಯಲೂ ಸಾಧ್ಯವಿಲ್ಲ’ ಎಂದರು.
ಉತ್ತೇಜನ ನೀಡಿದ್ದರು: ‘ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಹಾಗೂ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ನಿರ್ಮಿಸಿದ ಅಡಿಪಾಯವು ದೇಶದ ಇಂದಿನ ವೈಜ್ಞಾನಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಕಾರಣ. ನೆಹರೂ ಅವರಂಥ ದೂರದೃಷ್ಟಿಯ ಪ್ರಧಾನಿ ಅವರ ಕಾಲಘಟ್ಟದಲ್ಲೂ ಯಾರೂ ಇರಲಿಲ್ಲ, ಈಗಲೂ ಇಲ್ಲ. ವಿಜ್ಞಾನ ಮತ್ತು ಕೃಷಿ ಕ್ಷೇತ್ರಗಳ ಸಂಶೋಧನೆಗೆ ಅವರು ಸಾಕಷ್ಟು ಉತ್ತೇಜನ ನೀಡಿದ್ದರು. ಸ್ವತಃ ಅರಿವನ್ನೂ ಹೊಂದಿದ್ದರು’ ಎಂದು ಶ್ಲಾಘಿಸಿದರು.
‘ರಕ್ತವನ್ನು ಸಂಗ್ರಹಿಸುವ ಪ್ಲಾಸ್ಟಿಕ್ ಚೀಲಗಳು ಒಂದು ಸಣ್ಣ ಆವಿಷ್ಕಾರದಂತೆ ಕಂಡರೂ ಇದು ನಮ್ಮ ದೇಶಕ್ಕೆ ನೀಡುತ್ತಿರುವ ಆದಾಯ ಅಪಾರ. ಸುಮಾರು 80 ದೇಶಗಳಿಗೆ ನಾವು ಇದನ್ನು ರಫ್ತು ಮಾಡುತ್ತಿದ್ದೇವೆ’ ಎಂದು ವಿವರಿಸಿ, ರಕ್ತ ನಿಧಿಯ ಅಲಭ್ಯತೆ ಮತ್ತು ಸಾಗಣೆ ಅಗತ್ಯವು ಸಂಶೋಧನೆಗೆ ನೀಡಿದ ಪ್ರೇರೇಪಣೆ ಬಗ್ಗೆ
ತಿಳಿಸಿದರು.
ಸಾಧ್ಯವಾಯಿತು: ‘ವಜ್ರಗಳನ್ನು ಕತ್ತರಿಸಲು ಲೇಸರ್ ಬಳಸಬಹುದು ಎಂಬ ವಿಷಯವನ್ನು ಸೆಮಿನಾರ್ನಲ್ಲಿ ಆಲಿಸಿದ ಇಬ್ಬರು ಯುವಕರು, ವಿಜ್ಞಾನಿಗಳನ್ನು ಬಿಡದೇ ಹಿಂಬಾಲಿಸಿ ಸೂಕ್ತ ಯಂತ್ರವನ್ನು ತಯಾರಿಸಿ ಮಾರುಕಟ್ಟೆಗೆ ನೀಡಿದ ಕಾರಣ ಭಾರತವು ವಜ್ರಗಳ ಆಭರಣ ತಯಾರಿಕೆಯಲ್ಲಿ ಉನ್ನತ ಸ್ಥಾನ ಹೊಂದಲು ಸಾಧ್ಯವಾಯಿತು. ಸೋನಾಮಸೂರಿ ಅಕ್ಕಿಯ ನೈಜತೆಯನ್ನು ಡಿಎನ್ಎ ತಂತ್ರಾಂಶ ಮೂಲಕ ಕಂಡುಹಿಡಿಯಲು ತಯಾರಿಸಿದ ಸಂಶೋಧನೆಯು ಅಕ್ಕಿ ರಫ್ತು ಹೆಚ್ಚಲು ಕಾರಣವಾಯಿತು’ ಎಂದು ತಿಳಿಸಿದರು.
ಆಸಕ್ತರು ಹಲವು ಪ್ರಶ್ನೆಗಳನ್ನು ಕೇಳಿ ಗೊಂದಲ ಬಗೆಹರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.