ADVERTISEMENT

‘ಭಾರತೀಯ ಕೃಷಿ ಕವಲು ದಾರಿಯಲ್ಲಿದೆ’

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 14:16 IST
Last Updated 14 ಆಗಸ್ಟ್ 2022, 14:16 IST

ಮೈಸೂರು: ‘ಭಾರತೀಯ ಕೃಷಿಯು ಇಂದು ಕವಲು ದಾರಿಯಲ್ಲಿದೆ’ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಸೂಪರಿಂಟೆಂಡೆಂಟ್ ಡಾ.ಪಿ.ಪ್ರಕಾಶ್ ಹೇಳಿದರು.

ಅವಧೂತ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ‘ಕೃಷಿ ವಿಕಾಸ ಸಂಗಮ-ಸಾವಯವ ಕೃಷಿ’ ವಿಚಾರಸಂಕಿರಣದಲ್ಲಿ ‘ಸಾವಯವ ಕೃಷಿಯ ಅವಕಾಶಗಳು’ ಕುರಿತು ಅವರು ಮಾತನಾಡಿದರು.

‘ಮಣ್ಣಿನ ಆರೋಗ್ಯ ಕಾಪಾಡಿ, ಮುಂದಿನ ಪೀಳಿಗೆಗೆ ಉಳಿಸಬೇಕು. ಅದಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕ್ರಿಮಿ, ಕೀಟ ಹಾಗೂ ಕಳೆನಾಶಕಗಳನ್ನು ವಿಪರೀತವಾಗಿ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ನಾಶವಾಗಿ ಹಲವು ರೋಗಗಳಿಗೆ ಕಾರಣವಾಗುತ್ತಿದೆ’ ಎಂದು ತಿಳಿಸಿದರು.

‘ರಾಸಾಯನಿಕ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಹಲವು ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಜೈವಿಕ ಗುಣಧರ್ಮದಲ್ಲಿ ವ್ಯತ್ಯಾಸ ಆಗುತ್ತದೆ. ಮಣ್ಣಿನ ಫಲವತ್ತತೆ ಇಳಿಮುಖವಾಗುತ್ತದೆ’ ಎಂದು ಹೇಳಿದರು.

‘ಕೃಷಿ ಮಾಡುವವರು ಋಷಿಗಳಿದ್ದಂತೆ. ಇಡೀ ದೇಶ ರೈತರ ಮೇಲೆ ಅವಲಂಬನೆ ಆಗಿದ್ದರೂ ಅವರಿಗೆ ಸಿಗುವ ಗೌರವ ಕಡಿಮೆ’ ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ದತ್ತವಿಜಯಾನಂದ ಸ್ವಾಮೀಜಿ ವಿಷಾದಿಸಿದರು.

‘ಪ್ರಪಂಚಕ್ಕೆ ವ್ಯವಸಾಯ ಹೇಳಿಕೊಟ್ಟ ದೇಶ ಭಾರತ. ಇಂದು ಬೇರೆಯವರು ಬಂದು ಕೃಷಿ ಮಾಡುವುದನ್ನು ಹೇಳಿಕೊಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಡಾ.ಬಿ.ಎಸ್.ಚಂದ್ರಶೇಖರ್, ಸಹಜ ಸಮೃದ್ಧ ತಂಡದ ಕೃಷ್ಣಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.