ಮೈಸೂರು: ‘ಕೋವಿಡ್–19 ನಿಯಂತ್ರಣ ವಿಚಾರದಲ್ಲಿ ಕೆ.ಆರ್. ನಗರ ಕ್ಷೇತ್ರದ ಶಾಸಕರೇ ಸಹಕಾರ ನೀಡುತ್ತಿಲ್ಲ. ನಾನು ಬದುಕಿದ್ದೀನಾ? ಇಲ್ಲವೇ ಆ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ಬದುಕಿದ್ದಾರಾ? ಜನರೇ ತೀರ್ಮಾನಿಸಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಗುರುವಾರ ಇಲ್ಲಿ ತಿಳಿಸಿದರು.
‘ಕೆ.ಆರ್. ನಗರ ಕ್ಷೇತ್ರಕ್ಕೆ ಪರಿಶೀಲನೆಗೆಂದು ಹೋದಾಗ ಸಾ.ರಾ. ಮಹೇಶ್ ಬರಲಿಲ್ಲ. ಕೋವಿಡ್ ನಿಯಂತ್ರಣದ ಬಗ್ಗೆ ಆಸಕ್ತಿ ಇದ್ದರೆ, ಕ್ಷೇತ್ರದ ಜನರ ಮೇಲೆ ಕಾಳಜಿ ಇದ್ದಿದ್ದರೆ ಸಭೆಯಲ್ಲಿ ಹಾಜರಿರಬೇಕಿತ್ತು. ಸಹಕಾರ ನೀಡಬೇಕಿತ್ತು’ ಎಂದು ತಿರುಗೇಟು ನೀಡಿದರು.
ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 10 ಕ್ಷೇತ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ವರುಣಾದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ, ನರಸಿಂಹರಾಜ ಕ್ಷೇತ್ರದಲ್ಲಿ ತನ್ವೀರ್ ಸೇಠ್, ನಂಜನಗೂಡು ಶಾಸಕ ಹರ್ಷವರ್ಧನ್, ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್, ತಿ.ನರಸೀಪುರ, ಪಿರಿಯಾಪಟ್ಟಣ ಶಾಸಕರು, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಸಂಸದ ಪ್ರತಾಪಸಿಂಹ ಸಹಕಾರ ನೀಡಿದ್ದು, ಪರಿಶೀಲನೆ ವೇಳೆ ಪಾಲ್ಗೊಂಡಿದ್ದರು ಎಂದರು.
‘ಸಭೆ ನಡೆಸಿ ಬೆಡ್ ಹಾಗೂ ಇತರ ವ್ಯವಸ್ಥೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ಬೆಡ್ ಕೋರಿ ನನಗೂ ಹತ್ತಾರು ಕರೆಗಳು ಬರುತ್ತಿವೆ. ಆದರೆ, ಪ್ರಭಾವ ಬೀರುತ್ತಿಲ್ಲ, ಶಿಫಾರಸು ಮಾಡುತ್ತಿಲ್ಲ. ಸಂಕಷ್ಟಕ್ಕೆ ಒಳಗಾದವರಿಗೆ, ತೀವ್ರ ಸಮಸ್ಯೆ ಎದುರಿಸುತ್ತಿರುವವರಿಗೆ ಮೊದಲು ಬೆಡ್ ಕೊಡಿ ಎಂದು ವೈದ್ಯರಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.
‘ಜಿಲ್ಲಾಡಳಿತ 24x7 ಕೆಲಸ ಮಾಡುತ್ತಿದೆ. ಜಿಲ್ಲಾಧಿಕಾರಿ ಸರಿಯಾಗಿ ನಿದ್ದೆ ಮಾಡುತ್ತಿಲ್ಲ’ ಎಂದು ನುಡಿದರು.
ಸಚಿವರು ಬದುಕಿದ್ದಾರಾ: ‘ಮೈಸೂರು ಜಿಲ್ಲೆಯಲ್ಲಿ ವೆಂಟಿಲೇಟರ್ ಇಲ್ಲದೇ ಜನರು ಸಾಯುತ್ತಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಆರೋಗ್ಯ ಸೇವೆ ಉತ್ತಮಪಡಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಜಿಲ್ಲಾಡಳಿತ ಸತ್ತು ಹೋಗಿದೆಯಾ? ಉಸ್ತುವಾರಿ ಸಚಿವರು ಬದುಕಿದ್ದಾರಾ’ ಎಂದು ಸಾ.ರಾ. ಮಹೇಶ್ ಬುಧವಾರ ಪ್ರಶ್ನಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.