ಎಚ್.ಡಿ.ಕೋಟೆ: ಕಾರು ಅಪಘಾತ ಪ್ರಕರಣ ಸಂಬಂಧ ದೂರು ನೀಡಲು ಬಂದ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪದಡಿ, ತಾಲ್ಲೂಕಿನ ಬೀಚನಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಶ್ರೀನಿವಾಸ್ ಅವರನ್ನುಅಮಾನತು ಮಾಡಲಾಗಿದೆ.
ಸರಗೂರು ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯ ರಮೇಶ್ ಅವರ ಪುತ್ರಿ ಕಾವ್ಯಾ ಹಾಗೂ ಇಬ್ಬರು ಸಹೋದರಿಯರು ಚಿಕ್ಕಪ್ಪನ ಜತೆ ಬುಧವಾರ ಸಂಜೆ ಕಾರಿನಲ್ಲಿ ಮೈಸೂರು– ಮಾನಂದವಾಡಿ ಹೆದ್ದಾರಿಯಲ್ಲಿ ಹೋಗುತ್ತಿದ್ದರು. ಇದೇ ರಸ್ತೆಯಲ್ಲಿ ಮೈಸೂರು ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಇವರ ಕಾರಿಗೆ ಉಜ್ಜಿಕೊಂಡು ಹೋಗಿತ್ತು. ಕಾರಿನಲ್ಲಿದ್ದವರು ಬಾವಲಿ ಗ್ರಾಮದ ಬಳಿ ಬಸ್ ಅನ್ನು ಅಡ್ಡಗಟ್ಟಿ ಚಾಲಕನನ್ನು ಪ್ರಶ್ನಿಸಿದ್ದರು. ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಶ್ರೀನಿವಾಸ್ ಯುವತಿಯರನ್ನು ಅಸಭ್ಯವಾಗಿ ನಿಂದಿಸಿದ್ದರು ಎನ್ನಲಾಗಿದೆ.
ನಂತರ, ಕಾರಿನಲ್ಲಿದ್ದವರು ಅಪಘಾತ ಸಂಬಂಧ ಅಂತರಸಂತೆ ಉಪ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಕ್ಕೆ ಬಂದಿದ್ದಾರೆ. ಸಾರಿಗೆ ಬಸ್ ಚಾಲಕ ಯುವತಿಯರ ಕ್ಷಮಾಪಣೆ ಕೇಳಿದ್ದು, ರಾಜಿ ಸಂಧಾನ ಮಾಡಲಾಗಿದೆ.
ನಂತರ, ಹೊರ ಹೋಗುವಾಗ ಅಲ್ಲಿಗೆ ಬಂದ ಶ್ರೀನಿವಾಸ್ ಯುವತಿಯರನ್ನು ಮನಬಂದಂತೆ ನಿಂದಿಸಿದ್ದಾರೆ. ಇದರಿಂದ ಕೆರಳಿದ ಯುವತಿಯರು ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಿಪಿಐ ಹರೀಶ್ ಕುಮಾರ್ ಅವರಿಗೂ ದೂರು
ನೀಡಿದ್ದಾರೆ.
ಹೀಗಾಗಿ, ಶ್ರೀನಿವಾಸ್ ಅವರನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶಾಂತ್
ಆದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.