ADVERTISEMENT

ಮೈಸೂರು: ಅರಿವಿನ ಜಾತ್ರೆಗೆ ಸುತ್ತೂರು ಸಜ್ಜು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 5:08 IST
Last Updated 14 ಜನವರಿ 2026, 5:08 IST
<div class="paragraphs"><p>ಪೂಜೆಯ ನಂತರ ಮಹಾದಾಸೋಹಕ್ಕೆ ಅಡುಗೆ ಸಿದ್ಧತೆ ಆರಂಭಗೊಂಡಿತು.</p></div>

ಪೂಜೆಯ ನಂತರ ಮಹಾದಾಸೋಹಕ್ಕೆ ಅಡುಗೆ ಸಿದ್ಧತೆ ಆರಂಭಗೊಂಡಿತು.

   

ಮೈಸೂರು: ಭಕ್ತರ ಅರಿವಿನ ಜಾತ್ರೆಯಾದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ.15ರಿಂದ ಆರಂಭವಾಗಲಿದ್ದು, ಎಲ್ಲ ಸಿದ್ಧತೆಗಳು ಅಂತಿಮಗೊಂಡಿವೆ.

ಬುಧವಾರ ಬೆಳಿಗ್ಗೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕತೃ ಗದ್ದುಗೆಗೆ ಪೂಜೆ ಸಲ್ಲಿಸಿ, ನಂತರ ಮಹಾದಾಸೋಹ ನಡೆಯುವ ಸ್ಥಳಕ್ಕೆ ಬಂದು ಅಲ್ಲಿಯೂ ಪೂಜೆ ಸಲ್ಲಿಸಿ ಅನ್ನ ದಾಸೋಹಕ್ಕೆ ಸ್ವಾಮೀಜಿ ಚಾಲನೆ ನೀಡಿದರು.  

ADVERTISEMENT

ಸಂಕ್ರಾಂತಿ ಹಬ್ಬದಂದು ಆರಂಭವಾಗುವ ಜಾತ್ರೆಯು 20ರವರೆಗೆ ನಡೆಯಲಿದೆ. ಧಾರ್ಮಿಕ ಹಾಗೂ ಆಧ್ಯಾತ್ಮದ ಅನುಭೂತಿಯ ಜೊತೆಗೆ ಶಿಕ್ಷಣ, ಜಾಗೃತಿ ಮೂಡಿಸಲಿದೆ. ನಾಡಿನ ಮೂಲೆಗಳಿಂದ ಭಕ್ತ ಸಾಗರ ಹರಿದು ಬರಲಿದೆ.

25 ಲಕ್ಷ ಮಂದಿಗೆ ದಾಸೋಹ: ಮಠದಲ್ಲಿ ಹಬ್ಬದ ವಾತಾವರಣ ಮೂಡಿದ್ದು, ಸಾವಿರಾರು ಭಕ್ತರು ಕಾಯಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಯಂ ಸೇವಕರಾಗಿ ನಿವೃತ್ತರು, ರೈತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೆವರು ಹರಿಸುತ್ತಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ ಸೇರಿದಂತೆ ಎಲ್ಲೆಡೆಯಿಂದ ಬರುವ 25 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರಿಗಾಗಿ ದಾಸೋಹ ವ್ಯವಸ್ಥೆ ಮಾಡಲಾಗಿದೆ. 

16ರಂದು ಸಾಮೂಹಿಕ ವಿವಾಹ, ಹಾಲರವಿ ಉತ್ಸವ, 17ರಂದು ರಥೋತ್ಸವ, ವೀರಭದ್ರೇಶ್ವರ

ಕೊಂಡೋತ್ಸವ, 18ರಂದು ಮಹದೇಶ್ವರ ಕೊಂಡೋತ್ಸವ, ಲಕ್ಷದೀಪೋತ್ಸವ, 19ರಂದು ತೆಪ್ಪೋತ್ಸವ, 20ರಂದು ಅನ್ನಬ್ರಹೋತ್ಸವ ನಡೆಯಲಿದೆ. 18ರಂದು ಬೆಳಿಗ್ಗೆ 8.30ಕ್ಕೆ ‘ಕೃಷಿಯಲ್ಲಿ ಮಹಿಳೆ: ಸುಸ್ಥಿರ ಅಭಿವೃದ್ಧಿ ಮತ್ತು ಆಹಾರ ಭದ್ರತೆ’ ಕುರಿತ ವಿಚಾರಸಂಕಿರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. 

ವಸ್ತುಪ್ರದರ್ಶನ, ಕೃಷಿಮೇಳ, ಸಾಂಸ್ಕೃತಿಕ ಮೇಳ, ಕುಸ್ತಿ ಪಂದ್ಯಾವಳಿ, ದನಗಳ ಪರಿಷೆ, ಭಜನಾಮೇಳ, ದೇಸಿ ಆಟಗಳು, ಕಪಿಲಾರತಿ, ಸಾಂಸ್ಕೃತಿಕ ಸ್ಪರ್ಧೆ ರಂಗೋಲಿ ಸ್ಪರ್ಧೆ ಸೇರಿದಂತೆ ಸಾಲು ಸಾಲು ಕಾರ್ಯಕ್ರಮಗಳು 6 ದಿನವೂ ಜನರನ್ನು ಆಕರ್ಷಿಸಲಿವೆ.

ಪೊಲೀಸ್‌ ಬಂದೋಬಸ್ತ್‌: ಜಾತ್ರೆಯ ಹಿನ್ನೆಲೆಯಲ್ಲಿ ಸುತ್ತೂರಿನಲ್ಲಿ ಪೊಲೀಸ್‌ ಬಿಗಿಬಂದೋಬಸ್ತ್‌ ಏರ್ಪಡಿಸಲಾಗಿದೆ.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬುಧವಾರ ಕತೃ ಗದ್ದುಗೆಗೆ ಪೂಜೆ ಸಲ್ಲಿಸಿದರು