ಮೈಸೂರಿನ ಎಂಐಟಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಸೋಮವಾರ ನಡೆದ ಕೃತಕ ಬುದ್ಧಿಮತ್ತೆ ಕುರಿತ ಕಾರ್ಯಾಗಾರವನ್ನು ಮೈಸೂರು ವಿಶ್ವವಿದ್ಯಾಲಯದ ಪ್ರೊ.ಎಚ್.ಎಸ್.ನಾಗೇಂದ್ರ ಸ್ವಾಮಿ ಉದ್ಘಾಟಿಸಿದರು.
ಮೈಸೂರು: ‘ಎಲ್ಲ ಕ್ಷೇತ್ರಗಳಲ್ಲೂ ಇಂದು ಕೃತಕ ಬುದ್ಧಿ ಮತ್ತೆ (ಎಐ) ತಂತ್ರಜ್ಞಾನದ ಅಗತ್ಯ ಹೆಚ್ಚಿದೆ. ಈ ತಂತ್ರಜ್ಞಾನದ ಕ್ಷೇತ್ರ ವಿಕಸನಗೊಳ್ಳುತ್ತಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರೊ.ಎಚ್.ಎಸ್.ನಾಗೇಂದ್ರ ಸ್ವಾಮಿ ಹೇಳಿದರು.
‘ಮೈಸೂರಿನ ಎಂಐಟಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಸೋಮವಾರ ನಡೆದ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಂತ್ರಿಕ ಕ್ಷೇತ್ರದಲ್ಲಿ ಜ್ಞಾನದ ಉನ್ನತೀಕರಣ ಹಾಗೂ ಸ್ವಾವಲಂಬನೆಗೆ ಒತ್ತು ನೀಡಿ ತಾಂತ್ರಿಕ ಸ್ವಾತಂತ್ರವನ್ನು ಬಲಪಡಿಸಲು ದೇಶವು ಚಾಟ್ ಜಿಪಿಟಿ ಯಂತಹ ಸ್ಥಳೀಯ ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.
ಎಂಐಟಿ ಕಾಲೇಜಿನ ಉಪಾಧ್ಯಕ್ಷ ಪ್ರೊ.ಜಿ.ಹೇಮಂತ್ ಕುಮಾರ್, ‘ಆನ್ಲೈನ್ ಬದಲು ತಂತ್ರಜ್ಞಾನ ಕಲಿಕೆ ನೇರವಾಗಿ ನಡೆದರೆ ಭೌತಿಕ ಸಂವಹನ ಕಲಿಕೆ ಮತ್ತು ಜ್ಞಾನ ವಿನಿಮಯ ಹೆಚ್ಚುತ್ತದೆ. ಕೃತಕ ಬುದ್ಧಿಮತ್ತೆ ಕುರಿತ ಕಾರ್ಯಾಗಾರ ಒಂದು ವಾರ ನಡೆಯಲಿದ್ದು, ವಿಶೇಷ ತಜ್ಞರಿಂದ ಉಪನ್ಯಾಸಗಳು ನಡೆಯಲಿವೆ ’ ಎಂದರು.
ಸಂಸ್ಥೆಯ ಕಾರ್ಯದರ್ಶಿ ವೈ.ಟಿ.ಕೃಷ್ಣೇಗೌಡ ಮಾತನಾಡಿ, ‘ಕ್ವಾಂಟಮ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಮುಂದಿನ ಭವಿಷ್ಯವನ್ನು ರೂಪಿಸುತ್ತವೆ, ಮುಂಬರುವ ದಿನಗಳಲ್ಲಿ ಅಧ್ಯಾಪಕರು ಪರಿಕರ ತಂತ್ರಜ್ಞಾನದೊಂದಿಗೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕು’ ಎಂದು ಹೇಳಿದರು.
ಪ್ರಾಂಶುಪಾಲ ಚಂದ್ರಜಿತ್ ಮೋಹನ್, ಡಾ.ಎಸ್.ಪಿ.ಸುನೀತ,ಪ್ರೊ.ಜಿ.ಅರವಿಂದ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.