ADVERTISEMENT

ಮೈಸೂರು | ತೆರಿಗೆ ವಸೂಲಿ ಚುರುಕುಗೊಳಿಸಿ: ಸಿಇಒ ಯುಕೇಶ್‌ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:10 IST
Last Updated 19 ಫೆಬ್ರುವರಿ 2026, 4:10 IST
ಎಸ್. ಯುಕೇಶ್‌ಕುಮಾರ್‌
ಎಸ್. ಯುಕೇಶ್‌ಕುಮಾರ್‌   

ಮೈಸೂರು: ‘ತೆರಿಗೆ ವಸೂಲಾತಿ ಕಾರ್ಯ ಚುರುಕುಗೊಳಿಸಬೇಕು’ ಎಂದು ಜಿಲ್ಲಾ ‍ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್‌ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಇಒಗಳು ಹಾಗೂ ಪಿಡಿಒಗಳೊಂದಿಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಮಾತನಾಡಿದರು.

‘ಹಲವು ವರ್ಷಗಳಿಂದ ಉಳಿದಿರುವ ಬಾಕಿ ಸೇರಿದಂತೆ ಪ್ರಸಕ್ತ ವರ್ಷದ ತೆರಿಗೆಯನ್ನು 15 ದಿನಗಳೊಳಗೆ ಶೇ.90ರಷ್ಟು ವಸೂಲಿ ಮಾಡಬೇಕು. ನಿರೀಕ್ಷಿತ ಪ್ರಗತಿ ಸಾಧಿಸದಿದ್ದರೆ ಅದಕ್ಕೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶೇ.50ರಿಂದ 60ರಷ್ಟು ವಸೂಲಿ ಮಾಡಿರುವ ಪಂಚಾಯಿತಿಗಳು 15 ದಿನಗಳಲ್ಲಿ ಶೇ 90ರಷ್ಟು ಸಂಗ್ರಹಿಸುವುದು ಕಡ್ಡಾಯ’ ಎಂದು ನಿರ್ದೇಶನ ನೀಡಿದರು.

ADVERTISEMENT

‘ತೆರಿಗೆ ವಸೂಲಿ ಸರಿಯಾಗಿ ನಡೆಯದಿದ್ದರೆ ಸಿಬ್ಬಂದಿ ವೇತನ ಪಾವತಿಸಲಾಗದು. ಗ್ರಂಥಾಲಯಗಳ ನಿರ್ವಹಣೆಗೆ ತೊಡಕಾಗುತ್ತದೆ. ಇದನ್ನು ಅರಿತು ಗಂಭೀರವಾಗಿ ಪರಿಗಣಿಸಬೇಕು. ಬಿಲ್‌ ಕಲೆಕ್ಟರ್‌ ಜೊತೆಗೆ ಪಿಡಿಒಗಳು, ಕಾರ್ಯದರ್ಶಿಗಳು ಕೂಡ ಮುತುವರ್ಜಿ ವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ತಾ.ಪಂ. ಇಒಗಳು ವಾರಕ್ಕೊಮ್ಮೆ ಪರಿಶೀಲಿಸಬೇಕು’ ಎಂದು ಸೂಚಿಸಿದರು.

ನೆಪ ಹೇಳಬೇಡಿ: ಕೆ.ಆರ್.ನಗರ ತಾಲ್ಲೂಕಿನ ಚಂದಗಾಲು, ಮಾವತ್ತೂರು, ಲಾಳಂದೇದವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಸೂಲಿ ಪ್ರಮಾಣ ಕಡಿಮೆ ಇದೆ. ಅಂತೆಯೇ ತಿ.ನರಸೀಪುರ ತಾಲ್ಲೂಕಿನ ಸೋಸಲೆ, ಮೂಗೂರು, ಹೊಳೆಸಾಲು ಮೊದಲಾದ ಕಡೆಗಳಲ್ಲೂ ವಸೂಲಿ ಸಂಗ್ರಹದಲ್ಲಿ ಹಿಂದುಳಿಯಲಾಗಿದೆ. ಇದಕ್ಕೆ ಕಾರಣವೇನು ಎಂದು ಕೇಳಿದರು. ನೆಪ ಹೇಳುವುದು ಸರಿಯಲ್ಲ ಎಂದರು.

ಎಚ್‌.ಡಿ. ಕೋಟೆ ತಾಲ್ಲೂಕು ತೆರಿಗೆ ವಸೂಲಾತಿಯಲ್ಲಿ ಹಿಂದೆ ಬಿದ್ದಿದೆ. ಹಾಡಿಗಳಿವೆ ಎಂಬ ಕಾರಣಕ್ಕೆ ಸಾಧನೆ ಆಗಿಲ್ಲ ಎನ್ನವುದು ಸರಿಯಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನೀರು ಪೂರೈಕೆಗೆ ಸಮನ್ವಯದಿಂದ ಕೆಲಸ ಮಾಡಿ: 

ಮುಂಬರುವ ದಿನಗಳಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗ್ರಾಮ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಸಮನ್ವಯದಿಂದ ಕೆಲಸ ಮಾಡಬೇಕು. ಮಾಧ್ಯಮದಲ್ಲಿ ಪ್ರಕಟವಾದ ಮೇಲೆ ಸರಿಪಡಿಸುವ ಕೆಲಸ ಮಾಡಿದರೆ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮ, ಬೀದಿಗಳ ಪಟ್ಟಿ ಮಾಡಬೇಕು. ಅಲ್ಲಿಗೆ ಆದ್ಯತೆ ಕೊಡಬೇಕು. ಗ್ರಾಮ ‍ಪಂಚಾಯಿತಿಯಲ್ಲಿ ಅನುದಾನ ಇಲ್ಲದಿದ್ದರೆ ತಾ.ಪಂ., ಜಿ.ಪಂ. ಅನುದಾನ ಬಳಕೆಗೆ ಅವಕಾಶವಿದೆ. ಅಗತ್ಯವಿರುವ ಕಡೆಗಳಲ್ಲಿ ಕೊಳವೆಬಾವಿ, ಕಿರುತೊಂಬೆಗಳನ್ನು ನಿರ್ಮಿಸಬೇಕು. 15 ದಿನಗಳಿಗೊಮ್ಮೆ ನೀರಿನ ಮಾದರಿ ಪರೀಕ್ಷೆ ನಡೆಸಬೇಕು. ಶುದ್ಧ ನೀರು ಪೂರೈಕೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು’ ಎಂದು ಸೂಚಿಸಿದರು.

ಉಪ ಕಾರ್ಯದರ್ಶಿಗಳಾದ ಬಿ.ಎಂ.ಸವಿತಾ, ಭೀಮೇಶ್ ಕೆ.ಲಾಳಿ, ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಇಇ ಎಸ್.ವೀರೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ರಾಮಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಲೆಕ್ಕಾಧಿಕಾರಿ ಮಹೇಶ್ ಪಾಲ್ಗೊಂಡಿದ್ದರು. 

ವಿವಿಧ ಯೋಜನೆಗಳಡಿ ನಿರ್ಮಾಣಗೊಳ್ಳುತ್ತಿರುವ ಮನೆಗಳ ಪ್ರಗತಿ ಬಗ್ಗೆ ಜಿಪಿಎಸ್ ಅಪ್‌ಲೋಡ್ ಮಾಡಬೇಕು
ಎಸ್.ಯುಕೇಶ್‌ಕುಮಾರ್ ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.