ಹುಣಸೂರು: ಪ್ರಸಕ್ತ ಸಾಲಿನಲ್ಲಿ ತಂಬಾಕು ಪ್ರತಿ ಕೆ.ಜಿ.ಗೆ ಸರಾಸರಿ ₹350 ಸಿಗುವಂತೆ ತಂಬಾಕು ಮಂಡಳಿ ಕ್ರಮವಹಿಸಬೇಕು ಎಂದು ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಮಿತಿಯ ಸದಸ್ಯರು ಬೆಂಗಳೂರಿನಲ್ಲಿ ತಂಬಾಕು ಮಂಡಳಿ ನಿರ್ದೇಶಕ ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
‘ಪ್ರಸಕ್ತ ಸಾಲಿನಲ್ಲಿ ಅ.8ರಂದು ತಂಬಾಕು ಹರಾಜು ಮಾರುಕಟ್ಟೆ ಆರಂಭವಾಗಲಿದ್ದು, ಮಾರುಕಟ್ಟೆಯಲ್ಲಿ ಬೆಳೆಗಾರರು ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿದ್ದೇವೆ. ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದ ನಡುವೆಯೂ ತಂಬಾಕು ಬೆಳೆದಿದ್ದು, ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮಂಡಳಿ ವ್ಯಾಪಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಮಾರುಕಟ್ಟೆ ಆರಂಭಿಸಬೇಕು’ ಎಂದು ಮನವಿ ಮಾಡಿದ್ದೇವೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ತಿಳಿಸಿದ್ದಾರೆ.
‘ಪ್ರಸಕ್ತ ಸಾಲಿನಲ್ಲಿ ಆಂಧ್ರದಲ್ಲಿ ಪ್ರಥಮ ದರ್ಜೆ ತಂಬಾಕಿಗೆ ಪ್ರತಿ ಕೆ.ಜಿಗೆ ₹ 420 ಸಿಕ್ಕಿದ್ದು, ರಾಜ್ಯದ ತಂಬಾಕು ಆಂಧ್ರದ ತಂಬಾಕಿಗಿಂತಲೂ ಉತ್ಕೃಷ್ಟವಾಗಿದ್ದು, ಪ್ರತಿ ಕೆ.ಜಿ.ಗೆ ಕನಿಷ್ಠ ₹ 375 –₹ 420ಕ್ಕಿಂತ ಹೆಚ್ಚಿಗೆ ಸಿಕ್ಕಲ್ಲಿ ರೈತರಿಗೆ ಈ ಸಾಲಿನಲ್ಲಿ ಸರಾಸರಿ ₹ 350ಕ್ಕಿಂತ ತಗ್ಗದಂತೆ ತಂಬಾಕು ಹರಾಜು ಮಂಡಳಿ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದೇವೆ’ ಎಂದರು.
ರಾಜ್ಯ ತಂಬಾಕು ಬೆಳೆಗಾರರ ಮನವಿಗೆ ಮಂಡಳಿ ನಿರ್ದೇಶಕ ಶ್ರೀನಿವಾಸ್ ಸಕಾರಾತ್ಮಕ ಸ್ಪಂದಿಸಿದ್ದಾರೆ. ‘ಈಗಾಗಲೇ ಕಂಪನಿ, ಬೆಳೆಗಾರರ ನಡುವೆ ಒಂದು ಸುತ್ತಿನ ಮಾತುಕತೆ ನಡೆಸಿ ಕಂಪನಿಗಳಿಗೆ ರೈತರ ಕಷ್ಟ ತಿಳಿಸಲಾಗಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಚಂದ್ರೇಗೌಡ, ಅಧ್ಯಕ್ಷ ಮೂದೂರು ಶಿವಣ್ಣ, ಪ್ರಕಾಶ್ ರಾಜೆ ಅರಸು, ಅಗ್ರಹಾರ ರಾಮೇಗೌಡ, ಶಂಕರಪ್ಪ, ಕಿರಿಜಾಜಿ ಧನಂಜಯ್ಯ, ದಶರಥ, ಮಹದೇವು, ಕಾಂತರಾಜು, ಕರಿಶೆಟ್ಟಿ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.