ADVERTISEMENT

ಮೈಸೂರು: ಗರಿಗೆದರಿದ ‘ಪಾರಂಪರಿಕ ಸಂಗೀತೋತ್ಸವ’

12 ದಿನಗಳ ಉತ್ಸವಕ್ಕೆ ಸೂರ್ಯಗಾಯತ್ರಿ, ಮಲ್ಲಿಕಾರ್ಜುನಸ್ವಾಮಿ, ಜಗನ್ನಾಥ ಶೆಣೈ ಚಾಲನೆ

ಮೋಹನ್ ಕುಮಾರ ಸಿ.
Published 9 ಸೆಪ್ಟೆಂಬರ್ 2024, 6:23 IST
Last Updated 9 ಸೆಪ್ಟೆಂಬರ್ 2024, 6:23 IST
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಆಯೋಜಿಸಿರುವ 63ನೇ ‘ಪಾರಂಪರಿಕ ಸಂಗೀತೋತ್ಸವ'ಕ್ಕೆ ಸೂರ್ಯಗಾಯತ್ರಿ, ಜಗನ್ನಾಥ ಶೆಣೈ, ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಭಾನುವಾರ ಚಾಲನೆ ನೀಡಿದರು. ಪಿ.ಕೆ.ದಿವ್ಯಾ, ಸಿ.ಆರ್.ಹಿಮಾಂಶು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ಆಯೋಜಿಸಿರುವ 63ನೇ ‘ಪಾರಂಪರಿಕ ಸಂಗೀತೋತ್ಸವ'ಕ್ಕೆ ಸೂರ್ಯಗಾಯತ್ರಿ, ಜಗನ್ನಾಥ ಶೆಣೈ, ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಭಾನುವಾರ ಚಾಲನೆ ನೀಡಿದರು. ಪಿ.ಕೆ.ದಿವ್ಯಾ, ಸಿ.ಆರ್.ಹಿಮಾಂಶು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ನಗರದ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಿರುವ 63ನೇ ‘ಪಾರಂಪರಿಕ ಸಂಗೀತೋತ್ಸವ' ಭಾನುವಾರ ಆರಂಭಗೊಂಡಿತು.

ವಿದುಷಿ ಸೂರ್ಯಗಾಯತ್ರಿ, ಟ್ರಸ್ಟ್‌ ಅಧ್ಯಕ್ಷ ಜಗನ್ನಾಥ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ಚಾಲನೆ ನೀಡಿದರು.

‘ಕಲಾವಿದರ ಮೂಲಕ ಸಂಗೀತ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸುವ ಜವಾಬ್ದಾರಿಯನ್ನು ಆರು ದಶಕಗಳಿಂದ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದು ಮಲ್ಲಿಕಾರ್ಜುನಸ್ವಾಮಿ ಹೇಳಿದರು.

ADVERTISEMENT

‘ವ್ಯಕ್ತಿಯು ಕಲಾವಿದನಾಗಿ ರೂ‍ಪುಗೊಳ್ಳುವುದಕ್ಕೆ ಬಹಳ ವರ್ಷದ ಪರಿಶ್ರಮವಿರುತ್ತದೆ. ಕಲೆ ಒಲಿಯುವುದು ಸುಲಭವಲ್ಲ. ಅದು ತಪಸ್ಸಿನಂತೆ. ಅದು ಸಿದ್ಧಿಸಿದ ನಂತರ ಕಲಾವಿದನಷ್ಟೇ ಅಲ್ಲ, ಕಲೆ ಹಾಗೂ ಸಮಾಜವೂ ಬೆಳಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಅಮರವಾದ ಕಲೆಯ ಜೊತೆ ಬೆರೆತ ಕಲಾವಿದನ ಜೀವ ಮತ್ತು ಜೀವನ ಪಾವನವಾದದ್ದು. ಅದು ಸಮಾಜಕ್ಕೆ ಎಂದೂ ಹಾಗೂ ಎಲ್ಲಿಯೂ ಸಣ್ಣ ಸೂಜಿಮೊನೆಯಷ್ಟೂ ಕೆಡುಕು ಉಂಟು ಮಾಡುವುದಿಲ್ಲ. ಸೌಹಾರ್ದ ಹಾಗೂ ಜೀವಪ್ರೀತಿಯನ್ನು ಕಲಿಸುತ್ತದೆ’ ಎಂದರು.

‘ಕಲೆಯು ಒಮ್ಮೆ ಸಿದ್ಧಿಸಿದರೆ, ಕಲಾವಿದರ ಜೀವನದಲ್ಲಿನ ತಪ್ಪುಗಳೆಂಬ ಪುಟಗಳೇ ಮಾಯವಾಗುತ್ತವೆ. ಸಮಾಜಕ್ಕೆ ಬೇಕಾಗುವ ಕಲೆಯನ್ನು ನೀಡುವಲ್ಲಿ ನಿರತರಾದ ಅಪರೂಪದ ಪ್ರತಿಭೆಗಳನ್ನು ವಿ.ವಿ.ಮೊಹಲ್ಲಾದ 8ನೇ ಕ್ರಾಸ್‌ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜಕ್ಕೆ ಸಾಂಸ್ಕೃತಿಕ ಸ್ಪರ್ಶವನ್ನು ನೀಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರಸ್ಟ್‌ ಅಧ್ಯಕ್ಷ ಜಗನ್ನಾಥ ಶೆಣೈ ಮಾತನಾಡಿ, ‘ಜನರ ಸಹಕಾರದಿಂದಲೇ ಬಹುದೊಡ್ಡ ಉತ್ಸವ ನಡೆಯುತ್ತಿದೆ. ಈ ಕಾರ್ಯ ನಿರಂತರವಾಗಿರುತ್ತದೆ. ರಸ– ಭಾವ ಎಲ್ಲವೂ ಸಂಗೀತದಿಂದ ಸಿಗುತ್ತದೆ. ಈ ರುಚಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ಸಂಗೀತ ಪ್ರಿಯರದ್ದಾಗಿದೆ’ ಎಂದು ಹೇಳಿದರು.

ಟ್ರಸ್ಟ್‌ ಕಾರ್ಯದರ್ಶಿ ಸಿ.ಆರ್‌.ಹಿಮಾಂಶು, ಕವಯತ್ರಿ ಪಿ.ಕೆ.ದಿವ್ಯಾ ಹಾಜರಿದ್ದರು.

ವಿದುಷಿ ಸೂರ್ಯಗಾಯತ್ರಿ ಅವರ ಗಾಯನ ಲಹರಿ
ಜೀವ ಪ್ರೀತಿ ಕಲಿಸುವ ಸಂಗೀತ ಕಲೆಗಳಿಂದ ಸಮಾಜಕ್ಕೆ ಬೆಳಕು ಟ್ರಸ್ಟ್‌ನಿಂದ ಶ್ಲಾಘನೀಯ ಕಾರ್ಯ
ಸೂರ್ಯಗಾಯತ್ರಿ ಸೃಷ್ಟಿಸಿದ ‘ಭಾವ ಗಂಗೋತ್ರಿ’
ವಿದುಷಿ ಸೂರ್ಯಗಾಯತ್ರಿ ಅವರ ಕರ್ನಾಟಕ ಸಂಗೀತ ಗಾಯನದ ‘ಭಾವಗಂಗೋತ್ರಿ’ಯಲ್ಲಿ ಸಹೃದಯರು ಮಿಂದರು. ಪೋಷಕರಾದ ಮೃದಂಗ ವಾದಕ ಪಿ.ವಿ.ಅನಿಲ್ ಕುಮಾರ್ ಹಾಗೂ ಕವಯತ್ರಿ ಪಿ.ಕೆ.ದಿವ್ಯಾ ಅವರ ಸಂಯೋಜನೆಯ ‘ಲಂಬೋದರ ಸಿದ್ಧಿಪ್ರಿಯ ಗೌರಿ ತನಯ’ ಕೃತಿ ಹಾಡುವ ಮೂಲಕ ಕಛೇರಿ ಆರಂಭಿಸಿದರು. ‘ಭೈರವಿ’ ‘ವಸಂತ ಕಲ್ಯಾಣಿ’ ‘ಸಿಂಧು ಭೈರವಿ’ ‘ಮೋಹನ’ ಸೇರಿದಂತೆ ಹಲವು ರಾಗಗಳ ಮಿಳಿತವಿತ್ತು. ಮೃದಂಗದಲ್ಲಿ ವಿದ್ವಾನ್‌ ಕೃಪಾಲ್ ಸಾಯಿರಾಂ ‘ತಬಲಾ’ದಲ್ಲಿ ವಿದ್ವಾನ್‌ ಪ್ರಶಾಂತ್‌ ಶಂಕರ್‌ ಕೇಳುಗರ ಹೃದಯ ಧಿಮಿತವನ್ನು ಹೆಚ್ಚಿಸಿದರೆ ವಯಲಿನ್‌ನಲ್ಲಿ ವಿದ್ವಾನ್‌ ಆದರ್ಶ ಅಜಯ ಕುಮಾರ್‌ ನಾದದ ಮೋಡಿಯಲ್ಲಿ ಸೆಳೆದರು.  ‘ಅಭೇರಿ’ ರಾಗದ ಬ್ರಹ್ಮಾನಂದ ಅವರ ‘ಆಜ್‌ ಸಖಿ ಮೇರೆ ಸತ್‌ಗುರು’ ಕೀರ್ತನೆಯನ್ನು ತನ್ಮಯರಾಗಿ ಹಾಡಿದ ಪರಿಗೆ ಕೇಳುಗರು ಭಾವಪರವಶರಾದರು. ‘ಯಮನ್‌ ಕಲ್ಯಾಣಿ’ ರಾಗದ ಶೃಂಗೇರಿ ಭಾರತಿತೀರ್ಥ ಸ್ವಾಮೀಜಿ ಅವರ ಕೀರ್ತನೆ ‘ಗರುಡ ಗಮನ ತವ ಚರಣ ಕಮಲ ಮಿಹ’ ಗಾಯನಕ್ಕೆ ತಲೆದೂಗಿದರು. ತಬಲಾ– ಮೃದಂಗದ ಲಯದ ಮೋಡಿಗೆ ಒಳಗಾದರು. ತನಿ ಆವರ್ತನೆಯು ನೆರೆದಿದ್ದವರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ‘ಹನುಮಾನ್‌ ಚಾಲಿಸಾ’ ಮೂಲಕ ಭಕ್ತಿಪರವಶರನ್ನಾಗಿ ಮಾಡಿದ ಸೂರ್ಯಗಾಯತ್ರಿ ಜಾನಪದ ಭಕ್ತಿಗೀತೆ ‘ಸೋಜುಗಾದ ಸೂಜಿ ಮಲ್ಲಿಗೆ’ ಹಾಡಿ ಎಲ್ಲರನ್ನು ಸೆಳೆದರು. ಪುರಂದರ ದಾಸರ ಕೃತಿಗಳಾದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ‘ಜಗದೋದ್ಧಾರನ ಆಡಿಸಿದಳೆಯಶೋಧೆ’ ಹಾಡಿ ‘ಭಾವಲೋಕ’ ಸೃಷ್ಟಿಸಿದರು. ಲಾಲ್ಗುಡಿ ಜಯರಾಮನ್‌ ಅವರ ತಿಲ್ಲಾನದೊಂದಿಗೆ ಕಛೇರಿಗೆ ಅಂತ್ಯ ಹಾಡಿದಾಗ ಸಂಗೀತಪ್ರಿಯರು ಎದ್ದು ನಿಂತು ಚಪ್ಪಾಳೆಯ ಮೆಚ್ಚುಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.