ಮೈಸೂರು: ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆಯುವ ದಸರಾ ಕವಿಗೋಷ್ಠಿಯನ್ನು ‘ಪಂಚ ಕವಿಗೋಷ್ಠಿ’ ಹೆಸರಿನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಖ್ಯಾತ ಕವಿಗಳ ಜೊತೆಗೆ ಉದಯೋನ್ಮುಖ ಕವಿಗಳಿಗೂ ಅವಕಾಶ ನೀಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಐದು ವಿಭಿನ್ನ ಕವಿಗೋಷ್ಠಿ ಇದಾಗಿದ್ದು, ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಕವಿ ಡಾ.ದೊಡ್ಡರಂಗೇಗೌಡರು ದಸರಾ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ವಿಸ್ಮಿತ ಕವಿಗೋಷ್ಠಿ: ವಿಭಿನ್ನ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್, ಅಧಿಕಾರಿಗಳು, ವಕೀಲರು, ನಟಿ–ನಟಿಯರು ‘ವಿಸ್ಮಿತ ಕವಿಗೋಷ್ಠಿ’ಯಲ್ಲಿ ಅ.2ರಂದು ಕಾವ್ಯವಾಚನ ಮಾಡಲಿದ್ದಾರೆ.
ವಿಕಾಸ ಕವಿಗೋಷ್ಠಿ: ಮೈಸೂರು ಮತ್ತು ಪ್ರಾದೇಶಿಕ ಜಿಲ್ಲೆಗಳಾದ ಹಾಸನ, ಮಂಡ್ಯ, ಮಡಿಕೇರಿ, ಚಾಮರಾಜನಗರ ಜಿಲ್ಲೆಗಳ ಮಕ್ಕಳು, ಯುವತಿಯರು ಅ. 3ರಂದು ಕಾವ್ಯವಾಚನ ಮಾಡಲಿದ್ದಾರೆ.
ವಿನೋದ ಕವಿಗೋಷ್ಠಿ: ನಾಡಿನ ಪ್ರಸಿದ್ಧ ಕವಿಗಳು ಚುಟುಕು ಸಾಹಿತ್ಯದ ಮೂಲದ ‘ವಿನೋದ ಗೀತ ಗಾಯನ’ ನಡೆಸಲಿದ್ದಾರೆ. ಚುಟುಕು ಸಾಹಿತಿಗಳಾದ ದುಂಡಿರಾಜ್, ಅ.ರಾ.ಮಿತ್ರ ಹಾಗೂ ಸುಬ್ರಾಯ ಚೊಕ್ಕಾಡಿ ಈ ಕವಿಗೋಷ್ಠಿಯ ವಿಶೇಷ ಆಕರ್ಷಣೆಯಾಗಿದ್ದು, ಅ.4ರಂದು ನಡೆಯಲಿದೆ.
ವಿಶಿಷ್ಟ ಕವಿಗೋಷ್ಠಿ: ಅನಾಥರು, ವಿಶೇಷಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ರೈತರು, ಆಟೊ ಚಾಲಕರು, ಕೂಲಿಕಾರ್ಮಿಕರಿಗೆ ಈ ಕವಿಗೋಷ್ಠಿಯಲ್ಲಿ ಅವಕಾಶ ನೀಡಲಾಗುತ್ತದೆ. ತಮ್ಮ ಜೀವನದಲ್ಲಿ ಎದುರಿಸಿದ ಹಸಿಹಸಿ ಅನುಭವಗಳನ್ನು ಕಾವ್ಯರೂಪದಲ್ಲಿ ಅ.5ರಂದು ಪ್ರಸ್ತುತಪಡಿಸಲಿದ್ದಾರೆ.
ವಿಖ್ಯಾತ ಕವಿಗೋಷ್ಠಿ: ಕನ್ನಡದ ಸಹವರ್ತಿ ಭಾಷೆಗಳಾದ ತುಳು, ಕೊಂಕಣಿ, ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ತಲಾ ಒಬ್ಬರು ಅ.6ರಂದು ಕಾವ್ಯವಾಚನ ಮಾಡಲಿದ್ದಾರೆ.
ಸ್ಮರಣಸಂಚಿಕೆ ತರಲು ನಿರ್ಧಾರ: ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಕವಿಗಳ ಕಾವ್ಯಗಳನ್ನು ಕ್ರೋಢಿಕರಿಸಿಕೊಂಡು, 8ರಿಂದ 10 ದಿನಗಳಲ್ಲಿ ‘ಸ್ಮರಣಸಂಚಿಕೆ’ ಹೊರತರಲು ನಿರ್ಧರಿಸಲಾಗಿದೆ. ಅಲ್ಲದೇ, ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ತುಳಸಿಗಿಡಗಳನ್ನು ನಿರ್ಧರಿಸಲಾಗಿದೆ ಎಂದು ಕವಿಗೋಷ್ಠಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ ಸಿಂಹ, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ದಸರಾ ಕವಿಗೋಷ್ಠಿಯ ಎಂ.ಆರ್.ಬಾಲಕೃಷ್ಣ, ಉಪಾಧ್ಯಕ್ಷರಾದ ಚಿಕ್ಕಮ್ಮ ಬಸವರಾಜ್, ಎಸ್.ಕೆ.ದಿನೇಶ್, ಎಸ್. ವಾಣೀಶ್ಕುಮಾರ್, ದಸರಾ ಉಪವಿಶೇಷಾಧಿಕಾರಿಗಳಾದ ಮಂಜುನಾಥ್.ಬಿ, ಕಾರ್ಯಾಧ್ಯಕ್ಷರಾದ ಡಾ.ಎನ್.ಕೆ.ಲೋಲಾಕ್ಷಿ, ಕಾರ್ಯದರ್ಶಿಯಾದ ಸಿ.ಆರ್.ಕೃಷ್ಣಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.