
ಹುಣಸೂರು ನಗರದ ದೊಡ್ಡ ಮಸೀದಿಯಲ್ಲಿ ಭಾನುವಾರ ರಂಜಾನ್ ಮಾಸದ ಪ್ರಯುಕ್ತ ವಕ್ಫ್ ಮಂಡಳಿ ಧಾರ್ಮಿಕ ಗುರುಗಳಿಗೆ ನೀಡುವ ರಂಜಾನ್ ಕಿಟ್ ಮತ್ತು ವೈಯಕ್ತಿಕ ನಗದನ್ನು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ವಿತರಿಸಿದರು
ಹುಣಸೂರು: ‘ಮುಸ್ಲೀಮರ ಧಾರ್ಮಿಕ ಶ್ರೇಷ್ಠತೆಯ ಹಬ್ಬ ರಂಜಾನ್ನಲ್ಲಿ ಪ್ರತಿಯೊಬ್ಬರೂ ಕಟ್ಟುನಿಟ್ಟಿನ ಉಪವಾಸ ಮಾಡಿ ದೇವರನ್ನು ಪ್ರಾರ್ಥಿಸಿ ಸಮಾಜಕ್ಕೆ ಒಳಿತು ಬಯಸುವುದು ಶ್ಲಾಘನೀಯ ಕಾರ್ಯ’ ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ರಂಜಾನ್ ಮಾಸದ ಪ್ರಯುಕ್ತ ನಗರದ ದೊಡ್ಡ ಮಸೀದಿಯ ಮಸ್ಜಿದೇ ಅಲಾ ಸಭಾಂಗಣದಲ್ಲಿ ಭಾನುವಾರ ವಕ್ಫ್ ಮಂಡಳಿ ನೀಡಿದ ರಂಜಾನ್ ಕಿಟ್ ಹಸ್ತಾಂತರಿಸಿ ಹಾಗೂ ವೈಯಕ್ತಿಕ ನಗದು ನೀಡಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರು ಇಂದಿಗೂ ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರ ಕಷ್ಟ–ಸುಖಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದ್ದಾರೆ. ರಾಜ್ಯ ವಕ್ಫ್ ಮಂಡಳಿ ಈ ಸಾಲಿನಿಂದ ಧಾರ್ಮಿಕ ಗುರುಗಳಿಗೆ ಉಚಿತವಾಗಿ ರಂಜಾನ್ ಕಿಟ್ ವಿತರಿಸಿದೆ. ಇದಲ್ಲದೆ ಹಲವು ಉತ್ತಮ ಕೆಲಸವನ್ನು ಮಂಡಳಿ ಕಾರ್ಯರೂಪಕ್ಕೆ ತಂದು ಸಮಾಜದ ಅಭಿವೃದ್ಧಿಗೆ ಒತ್ತು ನೀಡಿದೆ’ ಎಂದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರ ಮನವೊಲಿಸಿ ಶಬ್ಬೀರ್ ನಗರ ಅಭಿವೃದ್ಧಿಗೆ ಅನುದಾನ ಒದಗಿಸಿದ್ದೇನೆ. ಇದಲ್ಲದೆ ಬಿಳಿಕೆರೆ ಹೋಬಳಿ ಗೊಮ್ಮಟಗಿರಿ ಜೈನ್ ಸಮುದಾಯದ ಕ್ಷೇತ್ರದ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡಿದ್ದು, ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಜಕಾರಣದಲ್ಲಿ ಸೋಲು– ಗೆಲುವು ಸಾಮಾನ್ಯ, ಆದರೆ ಈ ಸಮುದಾಯದವರ ಪ್ರೀತಿ, ವಿಶ್ವಾಸ ಸದಾ ಇರಲಿ’ ಎಂದು ಮನವಿ ಮಾಡಿದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅಜೀಝುಲ್ಲಾ ಮಾತನಾಡಿ, ‘ವಕ್ಫ್ ಮಂಡಳಿಯಿಂದ ಮುಸ್ಲಿಂ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ನೀಡಲಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಬೇಕು’ ಎಂದರು.
‘ಮಸೀದಿಗೆ ಸಂದಾಯವಾಗುವ ದೇಣಿಗೆ ಹಣವನ್ನು ಸಮುದಾಯದ ಮಕ್ಕಳ ಶಿಕ್ಷಣ, ಆರೋಗ್ಯ ವಿಧವೆಯರಿಗೆ ಸ್ವಂತ ಉದ್ಯೋಗ ಕಲ್ಪಿಸುವ ದಿಕ್ಕಿನಲ್ಲಿ ಹಲವು ಸಾಮಾಜಿಕ ಕೆಲಸ ಹಮ್ಮಿಕೊಳ್ಳಲಾಗಿದೆ’ ಎಂದರು
ಕಾರ್ಯಕ್ರಮದಲ್ಲಿ ಅಯುಬ್ ಖಾನ್, ಮಜಾಜ್ ಅಹಮ್ಮದ್, ಫೈರೋಜ್, ಜಾವಿದ್ ಮುನ್ನಾ, ಮೊಹಮ್ಮದ್ ಸಲಾವುದ್ದಿನ್, ಫಜಲುಲ್ಲಾ ಎಚ್.ಎಂ., ಫೈಸಲ್ ಸೈಯದ್ ರಿಜ್ವಾನ್ ಮುಜೀವ್ ಅಹಮ್ಮದ್, ಫಾಝಿಲ್, ರಾಘು, ರವಿ ಹಾಜರಿದ್ದರು.