ADVERTISEMENT

ವನ್ಯಪ್ರಾಣಿ ಹಾವಳಿ ನಿಯಂತ್ರಿಸಿ: ಅರಣ್ಯ ಸಚಿವ ಈಶ್ವರ್‌ ಖಂಡ್ರೆಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 2:46 IST
Last Updated 5 ಆಗಸ್ಟ್ 2025, 2:46 IST
ಹುಣಸೂರಿನ ಸಂವಿಧಾನ ವೃತ್ತದಲ್ಲಿ ರೈತ ಸಂಘ ಮತ್ತು ದಸಂಸ ವತಿಯಿಂದ ಅರಣ್ಯ ಸಚಿವ ಈಶ್ವರ್‌ ಖಂಡ್ರೆಗೆ ಮನವಿ ಪತ್ರ ನೀಡಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌ ರೈತರ ಸಮಸ್ಯೆ ವಿವರಿಸಿದರು
ಹುಣಸೂರಿನ ಸಂವಿಧಾನ ವೃತ್ತದಲ್ಲಿ ರೈತ ಸಂಘ ಮತ್ತು ದಸಂಸ ವತಿಯಿಂದ ಅರಣ್ಯ ಸಚಿವ ಈಶ್ವರ್‌ ಖಂಡ್ರೆಗೆ ಮನವಿ ಪತ್ರ ನೀಡಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌ ರೈತರ ಸಮಸ್ಯೆ ವಿವರಿಸಿದರು   

ಹುಣಸೂರು: ನಗರದ ಸಂವಿಧಾನ ವೃತ್ತದಲ್ಲಿ ಗಜಪಯಣ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರನ್ನು ರೈತ ಸಂಘ ಮತ್ತು ದಸಂಸ ಮುಖಂಡರು ಭೇಟಿ ಮಾಡಿ ವನ್ಯಪ್ರಾಣಿ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಮನವಿ ಸಲ್ಲಿಸಿದರು. 

ಅರಣ್ಯದಂಚಿನ ಗ್ರಾಮದಲ್ಲಿ ವನ್ಯಪ್ರಾಣಿ ಹಾವಳಿಗೆ ರೈತರು ನಿರಂತರವಾಗಿ ಫಸಲು ನಷ್ಟ ಹಾಗೂ ಜೀವಹಾನಿಗೆ ತುತ್ತಾಗುತ್ತಿದ್ದು, ಅರಣ್ಯ ಇಲಾಖೆ ಮಾನವ ವನ್ಯಪ್ರಾಣಿ ಮಾನವ ಸಂಘರ್ಷ ನಿಯಂತ್ರಿಸಬೇಕು ಎಂದು ಕೋರಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌ ಮಾತನಾಡಿ, ಅರಣ್ಯದಂಚಿನಲ್ಲಿ ಮಾನವ ವನ್ಯಜೀವಿ ಸಂಘರ್ಷ ನಿರಂತರವಾಗಿದೆ. ಉಪಟಳ ನಿಯಂತ್ರಿಸಲು ಇಲಾಖೆ ಗಂಭೀರ ಪ್ರಯತ್ನ ಮಾಡಿಲ್ಲ. ರೈಲ್ವೆ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿ ಆನೆ ಗ್ರಾಮದತ್ತ ಬರುತ್ತಿದೆ. ಅರಣ್ಯ ಇಲಾಖೆ ಗುರುತಿಸಿರುವ ಸ್ಥಳದಲ್ಲಿ ರೈಲ್ವೆ ತಡೆಗೋಡೆ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮನವಿ ಸ್ವೀಕರಿಸಿದ ಸಚಿವ ಈಶ್ವರ್‌ ಖಂಡ್ರೆ ಮಾತನಾಡಿ, ‘ಅರಣ್ಯದಂಚಿನ ಗ್ರಾಮಗಳಿಗೆ ವನ್ಯಪ್ರಾಣಿ ಹಾವಳಿ ಇರುವುದು ತಿಳಿದಿದೆ. ಈ ಹಾವಳಿ ನಿಯಂತ್ರಣಕ್ಕೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ಈಗಾಗಲೇ ನಾಗರಹೊಳೆ ಅರಣ್ಯದಲ್ಲಿ ಗರುಡ ಎಂಬ ಯೋಜನೆ ಜಾರಿಯಲ್ಲಿದ್ದು, ಆ ಮೂಲಕ ಆನೆ ಚಲನವಲನ ಕುರಿತು ಅರಣ್ಯ ಸಿಬ್ಬಂದಿಗಳ ಮೊಬೈಲ್‌ಗೆ ಸಂದೇಶ ಬರುತ್ತಿದ್ದಂತೆ ಅರಣ್ಯ ಇಲಾಖೆ ಸ್ಥಳಕ್ಕೆ ಬರುವ ವ್ಯವಸ್ಥೆ ಚಾಲನೆಯಲ್ಲಿದೆ. ಇದಲ್ಲದೆ ಮತ್ತಷ್ಟು ವೈಜ್ಞಾನಿಕ ಪ್ರಯತ್ನಗಳು ನಡೆದಿದ್ದು, ಎಲ್ಲದಕ್ಕೂ ಪರಿಹಾರ ಸಿಗಲಿದೆ’ ಎಂದರು.

ರೈತ ಸಂಘ ನೀಡಿದ 11 ಬೇಡಿಕೆಗಳಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಕ್ರಮವಹಿಸುವೆ ಎಂದು ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆಲಿಜಾನ್‌, ತಾಲ್ಲೂಕು ಘಟಕದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಮಹದೇವ್‌, ತಟ್ಟೆಕೆರೆ ರಾಮಕೃಷ್ಣೇಗೌಡ, ವಿಷಕಂಠಪ್ಪ, ಬಸವರಾಜೇಗೌಡ, ಕಾಳೇನಹಳ್ಳಿ ವೆಂಕಟೇಶ್‌, ರಾಜು, ಸಿದ್ದೇಶ್‌, ಗಜೇಂದ್ರ, ದೇವೇಂದ್ರ, ವೆಂಕಟಾಚಲಪತಿ, ಗೋವಿಂದ ಇದ್ದರು.

‘ಅರಣ್ಯ ಸಮಿತಿಗಳು ನಿಷ್ಕ್ರಿಯ’:

‘ಅರಣ್ಯದಂಚಿನ ಗ್ರಾಮದಲ್ಲಿ ಅರಣ್ಯ ಸಮಿತಿಗಳು ನಿಷ್ಕ್ರಿಯಗೊಂಡಿದ್ದು ಜೀವ ತುಂಬಿಸುವ ಕೆಲಸ ಆಗಬೇಕಾಗಿದೆ. ಈ ಸಮಿತಿಯೊಂದಿಗೆ ಅರಣ್ಯ ಇಲಾಖೆ ಉತ್ತಮ ಸಂಬಂಧ ಹೊಂದುವುದರಿಂದ ಅರಣ್ಯದಂಚಿನ ಸಮಸ್ಯೆ ಪರಿಹರಿಸಲು ಸಹಕಾರವಾಗಲಿದೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.