ADVERTISEMENT

ಮೈಸೂರು: ಲೇಖಕ ಬಸವರಾಜು ಕುಕ್ಕರಹಳ್ಳಿ ನಿಧನ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 11:18 IST
Last Updated 3 ನವೆಂಬರ್ 2022, 11:18 IST
ಬಸವರಾಜು ಕುಕ್ಕರಹಳ್ಳಿ
ಬಸವರಾಜು ಕುಕ್ಕರಹಳ್ಳಿ   

ಮೈಸೂರು: ಲೇಖಕ ಬಸವರಾಜು ಕುಕ್ಕರಹಳ್ಳಿ (67) ರಾಮಕೃಷ್ಣನಗರದ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪುತ್ರ ಇದ್ದಾರೆ.

ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕರಾಗಿ ನಿವೃತ್ತರಾಗಿದ್ದ ಅವರು, ‘ಮೊಕಾರ’, ‘ಜೀವಾಳ’, ‘ಪುನುಗ’ ಹಾಗೂ ‘ಬಾಳಾಟ’ ಕಥಾ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದರು. ನೀಳ್ಗತೆ ‘ಕಾಲನೊದ್ದವರು’, ಕವನ ಸಂಕಲನ ‘ಅವ್ವ ಬರಲೇ ಇಲ್ಲ’ ಅವರ ಪ್ರಕಟಿತ ಕೃತಿಗಳು.

ಸಾಹಿತ್ಯ ಕೃಷಿಯ ಜೊತೆಗೆ ರಂಗಭೂಮಿ ತೊಡಗಿಸಿಕೊಂಡಿದ್ದ ಅವರು, ಸಾವಯವ ಕೃಷಿಗೆ ಮಾರುಕಟ್ಟೆ ಕಲ್ಪಿಸಲು ‘ನಿಸರ್ಗ ಟ್ರಸ್ಟ್(ರಿ) ನೈಸರ್ಗಿಕ ಆಹಾರೋತ್ಪನ್ನ ಕೇಂದ್ರ’ ಸ್ಥಾಪಿಸಿದ್ದರು. ಹೊನ್ನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾಮೂಹಿಕ ಹೈನುಗಾರಿಕೆ ಬೇಸಾಯ ಪ್ರಯೋಗವನ್ನು ಸಂಸ್ಥೆಯ ಮೂಲಕ ಮಾಡಿದ್ದರು.

ADVERTISEMENT

‘ಮೊಕಾರ’ ಸಂಕಲನದ ‘ನೀರು’ ಕಥೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಶಿವಮೊಗ್ಗ ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದರೆ, ‘ಬಾಳಾಟ’ ಸಂಕಲನದ ‘ಅವ್ವ’ ಪದ್ಯ, ‘ನಾನೇಕೆ ಬರೆಯುತ್ತೇನೆ’ ಲೇಖನವು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪಠ್ಯವಾಗಿದೆ.

ಮೃತರ ಅಂತಿಮ ದರ್ಶನವನ್ನು ವಿದ್ಯಾರ್ಥಿಗಳು, ಲೇಖಕರು ಹಾಗೂ ಜನಪ್ರತಿನಿಧಿಗಳು ರಾಮಕೃಷ್ಣನಗರದ ನಿವಾಸದಲ್ಲಿ ಪಡೆದರು. ಶುಕ್ರವಾರ ಬೆಳಿಗ್ಗೆ 10ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.