ADVERTISEMENT

ಗಣಪತಿ ದೇವಸ್ಥಾನದ ವಾರ್ಷಿಕ ರಥೋತ್ಸವ

ಕುಶಾಲನಗರ: ಸಕಲ ಸಿದ್ಧತಾ ಕಾರ್ಯ ಪೂರ್ಣ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:26 IST
Last Updated 12 ನವೆಂಬರ್ 2019, 16:26 IST
ಕುಶಾಲನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಶ್ರೀ ಗಣಪತಿ ದೇವಸ್ಥಾನವನ್ನು ಬಣ್ಣ ಬಣ್ಣ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ
ಕುಶಾಲನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಶ್ರೀ ಗಣಪತಿ ದೇವಸ್ಥಾನವನ್ನು ಬಣ್ಣ ಬಣ್ಣ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ   

ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಇದೇ ನ.16 ರಂದು ವಿಜೃಂಭಣೆಯಿಂದ ನಡೆಯಲಿದ್ದು, ರಥೋತ್ಸವಕ್ಕೆ ಸಕಲ ಸಿದ್ಧತಾ ಕಾರ್ಯಕೈಗೊಳ್ಳಲಾಗಿದೆ.

ಸ್ಥಳೀಯ ಶ್ರೀ ಗಣಪತಿ ದೇವಸ್ಥಾನದ ಸೇವಾ ಸಮಿತಿ ವತಿಯಿಂದ ಮಧ್ಯಾಹ್ನ 12.30ಕ್ಕೆ ವೈಭವಯುತವಾಗಿ ರಥೋತ್ಸವ ಜರುಗಲಿದ್ದು, ಇದರ ಅಂಗವಾಗಿ ದೇವಾಲಯದಲ್ಲಿ 9 ದಿನಗಳ ಕಾಲ ಬೆಳಿಗ್ಗೆ ಮತ್ತು ರಾತ್ರಿ 8ಕ್ಕೆ ಪಂಚಾಮೃತ ಅಭಿಷೇಕ, ಅರ್ಚನೆ, ನೈವೇದ್ಯದೊಂದಿಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.

ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್ ಮತ್ತು ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸ ರಾವ್ ಹಾಗೂ ಖಜಾಂಜಿ ಎಂ.ಕೆ.ದಿನೇಶ್ ನೇತೃತ್ವದಲ್ಲಿ ಸಮಿತಿಯ ಸದಸ್ಯರು ರಥೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದು ಸಕಲ ಸಿದ್ದತಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ADVERTISEMENT

ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ನ.14 ರಂದು ಕಾರ್ತಿಕ ದಟ್ಟೋತ್ಸವ, ನ.15 ರಂದು ಅಷ್ಠೋತ್ತರ ಪೂಜೆ, ನ.16 ರಂದು ರಥೋತ್ಸವ, ನ.17ರಂದು ಮೂಷಿಕ ವಾಹನ ಉತ್ಸವ, ನ.18 ರಂದು ಚಂದ್ರಬಿಂಬೋತ್ಸವ, ನ.19 .ರಂದು ಪಲ್ಲಕಿ ಉತ್ಸವ, ನ.20 ರಂದು ಮಂಟಪೋತ್ಸವ, ನ.21 ರಂದು ಹೂವಿನ ಪಲ್ಲಕಿ ಮಂಟಪೋತ್ಸವ, ನ.22 ರಂದು ಅನ್ದೋಲಿಕೋತ್ಸವ, ನ.23 ರಂದು ತೆಪ್ಪೋತ್ಸವ, ನ.24ರಂದು ತೀರ್ಥಸ್ನಾನ ರಾತ್ರಿ ಮಹಾಮಂಗಳಾರತಿ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

ಸಾವಿರಾರು ಭಕ್ತರು ಭಾಗಿ: ಗಣಪತಿ ದೇವಾಲಯದಲ್ಲಿ ಅನೇಕ ಶತಮಾನಗಳಿಂದ ನಡೆಯುತ್ತಿರುವ ಇತಿಹಾಸ ಪ್ರಸಿದ್ದ ಈ ಜಾತ್ರೆಗೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನರು ಸೇರಿದಂತೆ ಕೊಡಗು ಜಿಲ್ಲೆಯ ಸಾವಿರಾರೂ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಥೋತ್ಸವದ ಅಂಗವಾಗಿ ಗಣಪತಿ ದೇವಸ್ಥಾನ ಹಾಗೂ ಪಟ್ಟಣದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣವನ್ನು ಶುಚಿತ್ವ ಕಾರ್ಯ ಕೈಗೊಳ್ಳಲಾಗಿದೆ.

ಸಾಂಸ್ಕೃತಿ ಕಾರ್ಯಕ್ರಮ: ರಥೋತ್ಸವದ ಅಂಗವಾಗಿ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ನಿರ್ಮಿಸಲಾಗುವ ಸಾಂಸ್ಕೃತಿಕ ವೇದಿಕೆಯಲ್ಲಿ ನ.14 ರಿಂದ 21 ರ ತನಕ ರಾತ್ರಿ 7ರ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವಾರ್ಷಿಕ ರಥೋತ್ಸವದ ಅಂಗವಾಗಿ 99 ನೇ ಗೋಪ್ರದರ್ಶನ ಮತ್ತು ಜಾತ್ರೆ ಗುಂಡೂರಾವ್ ಜಾತ್ರಾ ಮೈದಾನದ ಆವರಣದಲ್ಲಿ ನಡೆಯಲಿದ್ದು, ಉತ್ತಮ ರಾಸುಗಳ ಆಯ್ಕೆಯು ನ.19 ರಂದು ನಡೆಯುತ್ತದೆ. ಸಮಿತಿಯ ಉಪಾಧ್ಯಕ್ಷ ಆರ್,ಬಾಬು, ಸಹ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ನಿರ್ದೇಶಕರಾಗಿ ಎಸ್.ಎನ್.ನರಸಿಂಹಮೂರ್ತಿ, ವಿ.ಪಿ.ಶಶಿಧರ್, ಜಿ.ಎಲ್.ನಾಗರಾಜು, ಎಂ.ವಿ.ನಾರಾಯಣ್, ಕಾಯಂ ಆಹ್ವಾನಿತರಾಗಿ ಟಿ.ಆರ್.ಶರವಣಕುಮಾರ್, ವಿಶೇಷ ಆಹ್ವಾನಿತರಾಗಿ ವಿ.ಡಿ.ಪುಂಡರೀಕಾಕ್ಷ, ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ್ಣ, ವೈ.ಆರ್.ನಾಗೇಂದ್ರ, ಡಿ.ಸಿ.ಜಗದೀಶ್, ಕೆ.ಎನ್.ಸುರೇಶ್, ಕೆ.ಸಿ.ನಂಜುಂಡಸ್ವಾಮಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅನ್ನದಾನ ವ್ಯವಸ್ಥೆ : ರಥೋತ್ಸವದ ಅಂಗವಾಗಿ ಅನ್ನಸಂತರ್ಪಣಾ ಸಮಿತಿ ವತಿಯಿಂದ ಗಾಯಿತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ಭಕ್ತಾಧಿಗಳಿಗೆ ಅನ್ನದಾನದ ವ್ಯವಸ್ಥೆ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.