ADVERTISEMENT

ಅಧಿಕಾರಿ ಭರವಸೆ: ಉಪವಾಸ ಸತ್ಯಾಗ್ರಹ ಅಂತ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:29 IST
Last Updated 6 ಡಿಸೆಂಬರ್ 2012, 6:29 IST

ಮಾನ್ವಿ: ಪಟ್ಟಣದ ಸೋನಿಯಾ ಗಾಂಧಿ ನಗರದ ಆಶ್ರಯ ಯೋಜನೆ ನಿವೇಶನಗಳ ಹಂಚಿಕೆಗೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆಸಲಾಗುತ್ತಿದ್ದ ಅನಿರ್ದಿಷ್ಟ ಸರಣಿ ಉಪವಾಸ ಸತ್ಯಾಗ್ರಹವನ್ನು ಬುಧವಾರ ಅಧಿಕಾರಿಗಳ ಭರವಸೆಯ ಮೇರೆಗೆ ಅಂತ್ಯಗೊಳಿಸಲಾಯಿತು.

ಮಾಜಿ ಶಾಸಕ ಗಂಗಾಧರ ನಾಯಕ, ತಹಸೀಲ್ದಾರ್ ಎಂ.ಗಂಗಪ್ಪ ಕಲ್ಲೂರು ಹಾಗೂ ಪುರಸಭೆ ಅಧಿಕಾರಿಗಳು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು.

ಸೋನಿಯಾ ಗಾಂಧಿ ನಗರದ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಫಲಾನುಭವಿಗಳು ಹಾಗೂ ಸತ್ಯಾಗ್ರಹ ನಿರತರ ಬೇಡಿಕೆಗಳನ್ನು ಜ.25ರ ಒಳಗೆ ಈಡೇರಿಸುವುದಾಗಿ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಅವರು ತಹಸೀಲ್ದಾರ್ ಸಮ್ಮುಖದಲ್ಲಿ ಲಿಖಿತ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಮೇರೆಗೆ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿರುವುದಾಗಿ ಧರಣಿನಿರತರು ತಿಳಿಸಿದರು.

ಸೋನಿಯಾಗಾಂಧಿ ನಗರದ ಆಶ್ರಯ ಯೋಜನೆ ನಿವೇಶನಗಳ ಹಂಚಿಕೆ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಡಾ.ಶಿವರಾಜ ಬಿ.ಕೆ, ಎಂ.ಡಿ.ಬಾಬಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.