ಸಿಂಧನೂರು: ‘ಪ್ರಸ್ತುತ ಸಮಾಜವು ಬಾಲ್ಯವಿವಾಹ, ಮಹಿಳಾ ಅತ್ಯಾಚಾರ, ಅಸ್ಪೃಶ್ಯತೆಯಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂತಹ ಸಮಸ್ಯೆಗಳಿಗೆ ಚಿತ್ರಕಲಾವಿದರು ಸಕರಾತ್ಮಕವಾಗಿ ಸ್ಪಂದಿಸಿ ಸುಂದರ ಸಮಾಜದ ನಿರ್ಮಾಣಕ್ಕೆ ಕಾರಣೀಭೂತರಾಗಬೇಕು’ ಎಂದು ಶಿಕ್ಷಕ ವೀರೇಶ ಗೋನವಾರ ಕಲಾವಿದರಿಗೆ ಸಲಹೆ ನೀಡಿದರು.
ನಗರದ ಎಕ್ಸಲೆಂಟ್ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಶನಿವಾರ ನಡೆದ ಮಹ್ಮದ್ ಉಸ್ಮಾನ ಅಲಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾನವ ಸಮಾಜದ ಬೆಳವಣಿಗೆ ಆದಿ ಮಾನವರಿಂದ ಹಿಡಿದು ಇಂದಿನ ತಾಂತ್ರಿಕ ಯುಗದವರೆಗೆ ಚಿತ್ರ ಜಗತ್ತು ತನ್ನದೇ ಆದ ಛಾಪು ಮೂಡಿಸಿದೆ. ಸಮಾಜದ ಆರಂಭದ ಕಾಲಘಟ್ಟದಲ್ಲಿ ಸಮಾಜ ಕೇಂದ್ರಿತವಾಗಿದ್ದ ಚಿತ್ರಕಲೆ ಬರುಬರುತ್ತಾ ರಾಜಾಶ್ರಯವನ್ನು ಪಡೆದು ಸೀಮಿತವಾಗತೊಡಗಿತು. ಯುರೋಪಿನ ಕ್ರಾಂತಿ, ನವೋದಯ ಚಳವಳಿ, ರಷ್ಯಾ ಕ್ರಾಂತಿ ಫಲಪ್ರದವಾಗಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು’ ಎಂದರು.‘ಚಿತ್ರಕಲಾವಿದರು ಸಮಾಜದ ಕೂಸು ಎನ್ನುವುದನ್ನು ಮನಗಂಡು ತಮ್ಮ ನೈಜ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕೇವಲ ಸ್ಥಳೀಯವಾಗಿ ಪ್ರದರ್ಶನ ಕೈಗೊಳ್ಳದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಿಂಧನೂರಿನ, ಜಿಲ್ಲೆಯ ಕಲಾವಿದರು ತಮ್ಮ ಪ್ರತಿಭೆಯನ್ನು ಮೆರೆಯಬೇಕು. ಆ ಮೂಲಕ ಲಲಿತಕಲಾ ಕ್ಷೇತ್ರದಲ್ಲಿ ಅಚ್ಚಳಿಯದ ಸಾಧನೆಯನ್ನು ಮಾಡಬೇಕು’ ಎಂದು ಹೇಳಿದರು.
ಹಿರಿಯ ಕಲಾವಿದ ವಾಜೀದ್ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲ ವೆಂಕಟರಾವ್ ಮಿರಿಯಂ ಅಧ್ಯಕ್ಷತೆ ವಹಿಸಿದ್ದರು. ಬಯಲಾಟ ಮತ್ತು ಯಕ್ಷಗಾನ ಅಕಾಡೆಮಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಮಾರೆಪ್ಪ, ಶಿಕ್ಷಕ ರಾಮದಾಸ ನಾಯ್ಕ, ಅಬ್ದುಲಸಾಬ ಸಾಲಗುಂದಾ, ಕಲಾವಿದ ಮಹ್ಮದ್ ಉಸ್ಮಾನ ಅಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.