ADVERTISEMENT

ಬತ್ತಿದ ಎನ್‌ಆರ್‌ಬಿಸಿ ನಾಲೆ: ಒಣಗಿದ ಬೆಳೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 9:00 IST
Last Updated 18 ಮಾರ್ಚ್ 2012, 9:00 IST

ದೇವದುರ್ಗ: ಅಚ್ಚ ಹಸಿರಿನ ಮಧ್ಯ ಆರ್ಥಿಕ ಸದೃಢತೆಯ ಕನಸು ಕಂಡ ತಾಲ್ಲೂಕಿನ ಬಹುತೇಕ ರೈತರ ಬದುಕಿಗೆ ಜೀವನಾಡಿ ಆಗಬೇಕಾಗಿದ್ದ ನಾರಾಯಣಪುರ ಬಲದಂಡೆ ಯೋಜನೆ ಸಂಬಂಧಿಸಿದವರ ನಿರ್ಲಕ್ಷ್ಯ ಧೋರಣೆಯಿಂದಾಗಿ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಎಪ್ರೆಲ್ ಕೊನೆಯ ವಾರದವರೆಗೂ ಕಾಲುವೆಗೆ ನೀರು ಹರಿಸಬೇಕಾದ ಇಲಾಖೆಯ ಅಧಿಕಾರಿಗಳು ಮಾರ್ಚ್ ಆರಂಭದಲ್ಲಿಯೇ ನೀರು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ನೀರಿಲ್ಲದೆ ಒಣಿಗಿ ನಿಂತಿರುವುದು ಕಂಡು ಬಂದಿದೆ.

ದಶಕದ ಹಿಂದೆ ಆರಂಭಗೊಂಡ ನಾರಾಯಣಪೂರ ಬಲದಂಡೆ ಯೋಜನೆ ಆರಂಭದಿಂದಲೇ ಆರೋಪ, ಪ್ರತ್ಯಾರೋಪ ನಡುವೆಯೇ ಕಾಲುವೆ ಕಾಮಗಾರಿ ಆರಂಭಗೊಂಡರೂ ಇಂದಿಗೂ ರೈತರನ್ನು ನೀರಾವರಿಯಿಂದ ಸಂತೃಪ್ತಿಗೊಳಿಸಲು ಸಾಧ್ಯವಾಗಿಲ್ಲ.

ರೈತರ ಹೊಲಕ್ಕೆ ನೀರು ಹರಿಸಿ ಹೊಸ ಜೀವನಕ್ಕೆ ಹಾದಿ ಮಾಡಿಕೊಡಬೇಕಾಗಿದ್ದ ಯೋಜನೆ ರೈತರ ಬುಡಕ್ಕೆ ನೀರು ಬಿಟ್ಟು, ಊರು ಬಿಡುವಂತೆ ಮಾಡಿದೆ. ಇಲಾಖೆಯ ಅಧಿಕಾರಿಗಳ ಮತ್ತು ಗುತ್ತೇಗೆದಾರರ ನಿರ್ಲಕ್ಷ್ಯೆದಿಂದಾಗಿ ತಾಲ್ಲೂಕಿನಲ್ಲಿ ಇನ್ನೂ ಅದೇಷ್ಟೊ ಕಾಮಗಾರಿಗಳು ನಡೆಯದೆ ನೆನೆಗುದಿಗೆ ಬಿದ್ದಿರುವುದು ಕಂಡು ಬಂದಿದೆಯಾದರೂ ಈ ಬಗ್ಗೆ ಸರ್ಕಾರವಾಗಲಿ ಅಥವಾ ಸ್ಥಳೀಯ ರೈತ ಪರ ಮುಖಂಡರೂ ಎಂದೂ ಚಿಂತಿಸಿದವರಲ್ಲ.

ಬೆಳಗಾದರೆ ಸ್ವಾರ್ಥ ರಾಜಕೀಯಕ್ಕಾಗಿ ರೈತರನ್ನು ಬಳಿಸಿಕೊಳ್ಳುತ್ತಿರುವ ವಿವಿಧ ರಾಜಕೀಯ ಪಕ್ಷಗಳು ಅದೇ ರೈತ ಜಮೀನುಗಳಿಗೆ ನೀರು ಹರಿಸುವ ಬಗ್ಗೆ ಗಮನ ಹರಿಸುತ್ತಿಲ್ಲ.ಈ ಹಿಂದೆ ರೈತರಿಗೆ ನ್ಯಾಯ ದೊರಕಿಸಿಕೊಡುವುದಾಗಿ ರಾಜ್ಯ ಮಟ್ಟದವರಿಗೂ ಹೋರಾಟ ನಿರ್ಮಿಸಿದ್ದ ಕೆಲವು ರೈತ ಪರ ಸಂಘಟನೆಗಳು ಈಗ ಕಾಲುವೆ ಬತ್ತಿ ನಿಂತು ಬೆಳೆಗಳು ಒಣಗಿ ನಿಂತರೂ ಧ್ವನಿ ಎತ್ತದೆ ಮೌನವಾಗಿರುವುದು ಜನರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಎನ್‌ಆರ್‌ಬಿಸಿ ಯೋಜನೆಯಲ್ಲಿ 15ನೇ ಉಪಕಾಲುವೆಯ ವಿವಿಧ ಕಾಮಗಾರಿ ಮಾತ್ರ ನೆನೆಗುದಿಗೆ ಬಿದ್ದಿವೆ. ಸಾವಿರಾರೂ ರೈತರು ನೀರಾವರಿಯಿಂದ ವಂಚಿತಗೊಂಡಿದ್ದಾರೆ. ಈ ಬಗ್ಗೆ ಯಾರೊಬ್ಬರೂ ಗಂಭೀರವಾಗಿ ಪರಿಣಿಸದೆ ಇರುವುದರಿಂದ ರೈತರಿಗೆ ದಿಕ್ಕು ಕಾಣದಂತಾಗಿದೆ.

ಗೋಳು: ಕಳೆದ ಕೆಲ ವರ್ಷಗಳಿಂದ ಮುಖ್ಯ ಕಾಲುವೆ ಸೇರಿದಂತೆ ಉಪಕಾಲುವೆಗಳು ಸಾಕಷ್ಟು ಬಾರಿ ಒಡೆದು ಹೋಗಿವೆ. ಶಾಶ್ವತ ದುರಸ್ತಿ ಬದಲು ತಾತ್ಕಾಲಿಕ ದುರಸ್ತಿ ಕಂಡಿವೆ. ಕಾಲುವೆಯಲ್ಲಿನ ಹೂಳು ತೆಗೆಯಲು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿ ಪಡೆದು ಕೋಟಿಗಟ್ಟಲೇ ಹಣ ಖರ್ಚು ಮಾಡಿದ ಬಗ್ಗೆ ದಾಖಲಾತಿಗಳಲ್ಲಿ ಹೇಳಲಾಗಿದ್ದರೂ ವಾಸ್ತವಿಕವಾಗಿ  ಕಾಲುವೆ ಸ್ವಚ್ಛತೆ ಇಲ್ಲದ ಕಾರಣ ರೈತರ ಜಮೀನಿಗೆ ನೀರು ಮುಟ್ಟಲಿಲ್ಲ.

ಕಳೆದ ವರ್ಷ ಕಾಲುವೆ ಸ್ವಚ್ಛತೆಗೆ ಮುಂದಾಗದೆ ಇರುವುದರಿಂದ ಗಿಡ, ಗಂಟಿ ಬೆಳೆದು ಕೊನೆ ಭಾಗದ ರೈತರ ಜಮೀನುಗಳಿಗೆ ಹನಿ ನೀರು ಹರಿಯದ ಕಾರಣ ಸಾವಿರಾರು ರೈತರು ತೊಂದರೆ ಪಟ್ಟು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನೆ ಇಲ್ಲದಂತಾಗಿದೆ.


ಆಗ್ರಹ: ಕಾಲುವೆ ನೀರು ನಂಬಿಕೊಂಡು ಬಿತ್ತನೆ ಮಾಡಿದ ಶೇಂಗ, ಸೂರ್ಯಕಾಂತಿ, ಹತ್ತಿ, ಮೆಣಸಿನಕಾಯಿ ಮತ್ತು ಭತ್ತದ ಬೆಳೆಗಳಿಗೆ ಕಳೆದ 15 ದಿನಗಳಿಂದ ನೀರು ಇಲ್ಲದೆ ಇರುವುದರಿಂದ ಬಾಡಿ ನಿಂತಿವೆ. 
                                                                      

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT