ADVERTISEMENT

ಹಾಡಹಗಲೇ ಮನೆಗೆ ನುಗ್ಗಿ ಚಿನ್ನ ದರೋಡೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 5:45 IST
Last Updated 11 ಸೆಪ್ಟೆಂಬರ್ 2013, 5:45 IST
ರಾಯಚೂರಿನಲ್ಲಿ ಮಂಗಳವಾರ ಮಧ್ಯಾಹ್ನ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಹೊದ ಬಳಿಕ ಗಾಬರಿಯಲ್ಲಿ ಕುಳಿತಿದ್ದ ಧನಲಕ್ಷ್ಮೀ ಬಡಾವಣೆ ನಿವಾಸಿ ರಮಾ ಸುಧಾಕರ
ರಾಯಚೂರಿನಲ್ಲಿ ಮಂಗಳವಾರ ಮಧ್ಯಾಹ್ನ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಹೊದ ಬಳಿಕ ಗಾಬರಿಯಲ್ಲಿ ಕುಳಿತಿದ್ದ ಧನಲಕ್ಷ್ಮೀ ಬಡಾವಣೆ ನಿವಾಸಿ ರಮಾ ಸುಧಾಕರ   

ರಾಯಚೂರು: ಹಾಡಹಗಲೇ ಇಲ್ಲಿನ ಜಹೀರಾಬಾದ್ ಬಡಾವಣೆ ಹತ್ತಿರ ಇರುವ ಧನಲಕ್ಷ್ಮೀ ಬಡಾವಣೆ ಮನೆಗೆ ನುಗ್ಗಿ ಮಹಿಳೆಯನ್ನು ಬೆದರಿಸಿ ಸುಮಾರು 30 ತೊಲ ಚಿನ್ನ ದೋಚಿ­ಕೊಂಡು ಪರಾರಿಯಾದ ಘಟನೆ ಮಂಗಳ­ವಾರ ನಡೆದಿದೆ.

ಧನಲಕ್ಷ್ಮೀ ಬಡಾವಣೆ ನಿವಾಸಿ ರಮಾ ಸುಧಾಕರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರು ರಮಾ ಸುಧಾಕರ ಅವರೊಬ್ಬರೇ ಮನೆ­ಯಲ್ಲಿದ್ದರು. ಬಟ್ಟೆ ತೊಳೆದು ಮನೆ­ಯೊಳಗಡೆ ಹೋಗುತ್ತಿರುವಾಗ ಅವರ ಬೆನ್ನ ಹಿಂದೆಯೇ ಮನೆಯೊಳಗಡೆ ಇಬ್ಬರು ಮಾರಕಾಸ್ತ್ರಗಳೊಂದಿಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ.

ರಮಾ ಸುಧಾಕರ ಅವರ ಕೈ  ಮತ್ತು ಕಾಲುಗಳನ್ನು ಕಟ್ಟಿ ಹಾಕಿದ್ದಾರೆ. ಅಲ್ಮೇರಾ ಕಿತ್ತಾಡಿದ್ದಾರೆ. 30 ತೊಲ ಚಿನ್ನ ದೋಚಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠ ಅಧಿಕಾರಿ ಎಂ.ಎನ್‌ ನಾಗರಾಜ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ ಸದಲಗಿ, ಸದರ ಬಜಾರ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಚಂದ್ರಶೇಖರ್‌, ನೇತಾಜಿ ನಗರ ಠಾಣೆ ಇನ್ಸಪೆಕ್ಟರ್‌ ಅಯ್ಯನಗೌಡ ಪಾಟೀಲ್‌ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ, ಬೆರಳಚ್ಚು ತಜ್ಞರ ತಂಡವೂ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಳವು: ಇಲ್ಲಿನ ಬಂಗಿಕುಂಟ ಬಡಾ­ವಣೆಯ ಆಶೀರ್ವಾದ ಮೆಡಿಕಲ್‌ ಶಾಪ್‌ನಲ್ಲೂ ಸೋಮವಾರ ರಾತ್ರಿ ಕಳ್ಳತನ ನಡೆದಿದೆ. ಪ್ರಕರಣ ಸದರ ಬಜಾರ ಠಾಣೆಯಲ್ಲಿ ದಾಖಲಾಗಿದೆ.

ನಾಲ್ಕು ದಿನದ ಹಿಂದೆಯಷ್ಟೇ ತಡರಾತ್ರಿ ಲಿಂಗಸುಗೂರಲ್ಲಿ ನಾಲ್ಕಾರು ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಘಟನೆ ನಡೆದಿತ್ತು. ಅದರ ಬೆನ್ನ ಹಿಂದೆಯೇ ಈಗ ರಾಯಚೂರು ನಗರ­ದಲ್ಲಿ ಹಾಡು ಹಗಲೇ ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿದ ಇಬ್ಬರು 30 ತೊಲ ಚಿನ್ನ ದೋಚಿ ಪರಾರಿ­ಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.