
ಮಸ್ಕಿ: ‘ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ‘ಕೃಷಿ ಋಷಿ’ ಘನಮಠ ನಾಗಭೂಷಣ ಶಿವಯೋಗಿಗಳ 146ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಡಿ. 24ರಂದು ಮಹಾರಥೋತ್ಸವ, ಸಾಮೂಹಿಕ ವಿವಾಹ ಹಾಗೂ ವಿವಿಧ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಶನಿವಾರ ಘನಮಠೇಶ್ವರ ಮಠದ ಪೀಠಾಧ್ಯಕ್ಷ ಗುರುಬಸವ ಸ್ವಾಮೀಜಿ ತಿಳಿಸಿದ್ದಾರೆ.
‘ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 5ಕ್ಕೆ ಘನಮಠ ಶಿವಯೋಗಿಗಳ ಕರ್ತೃ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿಶೇಷ ಧಾರ್ಮಿಕ ಪೂಜೆಗಳು ನೆರವೇರಲಿವೆ. ನಂತರ ವಚನಕಟ್ಟಿನ ಹಾಗೂ ಘನಮಠ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು, ಪೂರ್ಣಕುಂಭ ಕಳಸಗಳೊಂದಿಗೆ ಮಹಿಳೆಯರು ಭಾಗವಹಿಸಲಿದ್ದಾರೆ. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಶೋಭೆ ನೀಡಲಿವೆ’ ಎಂದು ಹೇಳಿದರು.
‘ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ಅನೇಕ ಮಠಾಧೀಶರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಘನಮಠ ಶಿವಯೋಗಿಗಳ ಮಹಾರಥೋತ್ಸವ ಜರುಗಲಿದೆ. ರಾತ್ರಿ ಧರ್ಮಜಾಗೃತಿ ಸಭೆ ಆಯೋಜಿಸಲಾಗಿದೆ. ಜಾತ್ರೆಯ ಅಂಗವಾಗಿ ಕೃಷಿ ವಿಚಾರ ಸಂಕಿರಣ, ಕೃಷಿ ವಸ್ತು ಪ್ರದರ್ಶನ ಸೇರಿದಂತೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ’ ಎಂದು ಸ್ವಾಮೀಜಿ ತಿಳಿಸಿದರು.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಕರಮುಡಿ ಗ್ರಾಮದ ಆನಂದ ಮಲ್ಲಿಗಿವಾಡ ಅವರು 2016ರಿಂದ ಈವರೆಗೆ 35ಕ್ಕೂ ಅಧಿಕ ಕೆರೆಗಳನ್ನು ಪುನರುಜ್ಜೀವನ ಗೊಳಿಸಿ ಬೆಂಗಳೂರಿನಲ್ಲಿ ಅಂತರ್ಜಲ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ದೇಶದಾದ್ಯಂತ 12 ರಾಜ್ಯಗಳಲ್ಲಿ ಸರ್ಕಾರಕ್ಕೆ ಸಲಹೆಗಾರರಾಗಿ ಆಗಿ ಕಾರ್ಯ ನಿರ್ವಹಿಸುತ್ತಿದ್ದು ದೇಶ ವಿದೇಶಗಳಲ್ಲಿಯೂ ‘ಭಾರತದ ಕೆರೆಗಳ ಮನುಷ್ಯ’ ಎಂದು ಪ್ರಸಿದ್ಧಿಯಾಗಿದ್ದಾರೆ. ಅವರಿಗೆ ಘನಮಠೇಶ್ವರ ಮಠದಿಂದ ಪ್ರತಿ ವರ್ಷ ನೀಡುವ ‘ಕೃಷಿ–ಋಷಿ’ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುಗುವುದು’ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.