ADVERTISEMENT

ರಾಯಚೂರು: ಜಿ+3 ಮಾದರಿಯ ವಸತಿ ಸಮುಚ್ಛಯ ವೀಕ್ಷಣೆ

‘ಕಾಮಗಾರಿ ಬೇಗ ಪೂರ್ಣಗೊಳಿಸಿ, ಬಡವರಿಗೆ ಮನೆ ಕೊಡಿ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:59 IST
Last Updated 4 ಡಿಸೆಂಬರ್ 2025, 5:59 IST
ರಾಯಚೂರು ಹೊರವಲಯದ ಯರಮರಸ್ ಬಳಿ ನಿರ್ಮಾಣ ಹಂತದಲ್ಲಿರುವ ಜಿ+3 ಮಾದರಿ ಸಮುಚ್ಛಯ
ರಾಯಚೂರು ಹೊರವಲಯದ ಯರಮರಸ್ ಬಳಿ ನಿರ್ಮಾಣ ಹಂತದಲ್ಲಿರುವ ಜಿ+3 ಮಾದರಿ ಸಮುಚ್ಛಯ   

ರಾಯಚೂರು: ಜಿ+3 ಮಾದರಿಯಲ್ಲಿ ಅನುಮೋನೆಗೊಂಡು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಉಪ ಘಟಕ ಎಎಚ್‌ಪಿ ಯೋಜನೆಯಡಿ ರಾಯಚೂರು ಮಹಾನಗರ ಪಾಲಿಕೆಗೆ 54ನೇ ಸಿಎಸ್‌ಎಂಸಿಯಲ್ಲಿ ಯರಮರಸ್ ಬಳಿ ನಿರ್ಮಾಣ ಹಂತದಲ್ಲಿರುವ ಜಿ+3 ಮಾದರಿಯ 2419 ವಸತಿ ಸಮುಚ್ಛಯದ ಸ್ಥಳಕ್ಕೆ‌ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

‘ಕಟ್ಟಡ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಿ ಬಡವರಿಗೆ ವಿತರಿಸಲು ಕ್ರಮವಹಿಸಬೇಕು’ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಜಿ+3 ಸಮುಚ್ಛಯ ನಿರ್ಮಾಣ ಕಾರ್ಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿದೆ. ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಈ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ದಾಖಲೆಯ 2419 ಮನೆಗಳನ್ನು ನಿರ್ಮಿಸಿ ಕಡುಬಡವರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದ ಹಾಗೂ ಹಿಂದುಳಿದ ವರ್ಗದ ಜನತೆಗೆ ನೀಡುತ್ತಿರುವುದು ರಾಯಚೂರ ಇತಿಹಾಸದಲ್ಲಿ ದಾಖಲಾರ್ಹ ಕಾರ್ಯವಾಗಿದೆ’ ಎಂದು ತಿಳಿಸಿದರು.

ADVERTISEMENT

ಹೆಚ್ಚುವರಿ ಅನುದಾನದ ಭರವಸೆ: ಯರಮರಸ್ ವಿಮಾನ ನಿಲ್ದಾಣದ ಸಮೀಪ ನಿರ್ಮಾಣವಾಗುತ್ತಿರುವ ಜಿ+3 ವಸತಿ ಸಮುಚ್ಚಯಕ್ಕೆ ಬೇಕಿರುವ ರಸ್ತೆ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಾರ್ಯಕ್ಕೆ ಬೇಕಾಗಿರುವ ಹೆಚ್ಚುವರಿ ಅನುದಾನವನ್ನು ನಗರಾಭಿವೃದ್ಧಿ ಇಲಾಖೆಯಿಂದ ಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

‘ಜಿ+3 ಮನೆಗಳನ್ನು 44 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮನೆಗಳ‌‌ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿದೆ. ಪರಿಶಿಷ್ಟ ಜಾತಿಗೆ 951 ಮನೆಗಳು, ಪರಿಶಿಷ್ಟ ಪಂಗಡಕ್ಕೆ 1053 ಮನೆಗಳು, ಸಾಮಾನ್ಯ ವರ್ಗಕ್ಕೆ 228 ಮನೆಗಳು ಮತ್ತು ಹಿಂದುಳಿದ ವರ್ಗಕ್ಕೆ 187 ಮನೆಗಳು ಅನುಮೋದನೆಯಾಗಿವೆ. ಈ ಯೋಜನೆಯ ಅಂದಾಜು ವೆಚ್ಚ ₹ 9 ಲಕ್ಷ ಇರುತ್ತದೆ. ಎಸ್ ಎಸಿ ಮತ್ತು ಎಸ್ ಟಿ ಅವರಿಗೆ ಕೇಂದ್ರ ‌ಮತ್ತು ರಾಜ್ಯದಿಂದ ಸಬ್ಸಿಡಿ ಅನುದಾನ ರಾಜ್ಯ ಸರ್ಕಾರದ ₹2 ಲಕ್ಷ ಹಾಗೂ ಕೇಂದ್ರ ಸರ್ಕಾರದ ₹1.5 ಲಕ್ಷ ರೂ ಅನುದಾನ ಸೇರಿ ಒಟ್ಟು ₹3.50 ಲಕ್ಷ ನಿಗದಿಪಡಿಸಲಾಗಿದೆ‘ ಎಂದು ತಿಳಿಸಿದರು.

‘ಬ್ಯಾಂಕಿನಿಂದ ಲೋನ್ ಪಡೆದು ಬಾಕಿ ಉಳಿದ ಅನುದಾನವನ್ನು ಫಲಾನುಭವಿಗಳೇ ಭರಿಸಬೇಕಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ಸಚಿವರಿಗೆ ಮಾಹಿತಿ ನೀಡಿದರು.

ಮಸ್ಕಿ ಶಾಸಕ ಬಸನಗೌಡ ತುರವಿಹಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಏಗನೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.