ADVERTISEMENT

ಮಂತ್ರಾಲಯಕ್ಕೆ ಇನ್ನೊಂದು ಗರಿ: ತಲೆ ಎತ್ತಲಿದೆ 108 ಅಡಿ ಎತ್ತರದ ಶ್ರೀರಾಮನ ಮೂರ್ತಿ

ಚಂದ್ರಕಾಂತ ಮಸಾನಿ
Published 10 ಅಕ್ಟೋಬರ್ 2023, 5:35 IST
Last Updated 10 ಅಕ್ಟೋಬರ್ 2023, 5:35 IST
ರಾಯಚೂರು ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಅನುಷ್ಠಾನಗೊಳ್ಳಲಿರುವ ಪಂಚಲೋಹದ 108 ಅಡಿ ಎತ್ತರದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಯೋಜನೆಯ ನೀಲನಕ್ಷೆ
ರಾಯಚೂರು ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಅನುಷ್ಠಾನಗೊಳ್ಳಲಿರುವ ಪಂಚಲೋಹದ 108 ಅಡಿ ಎತ್ತರದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಯೋಜನೆಯ ನೀಲನಕ್ಷೆ   

ಸನಾತನ ಧರ್ಮ ಹಾಗೂ ವೈಷ್ಣವ ಪರಂಪರೆಯನ್ನು ಗಟ್ಟಿಯಾಗಿ ನೆಲೆಗೊಳಿಸುವ ದಿಸೆಯಲ್ಲಿದ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಂತ್ರಾಲಯವು ಐತಿಹಾಸಿಕ ನೆಲೆಗಳಿಂದಲೇ ಪ್ರಸ್ತಿದ್ಧಿ ಪಡೆದಿದೆ. ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಮಂತ್ರಾಲಯದ ಶ್ರೀಮಠದಿಂದ 2 ಕಿ.ಮೀ ಅಂತರದಲ್ಲಿರುವ ಎಮ್ಮಿಗನೂರಿನಲ್ಲಿ ದೇಶದ ಅತಿದೊಡ್ಡ ಪಂಚಲೋಹದ 108 ಅಡಿ ಎತ್ತರದ ಶ್ರೀರಾಮನ ಮೂರ್ತಿ ಎರಡೂವರೆ ವರ್ಷಗಳಲ್ಲಿ ಅನಾವರಣಗೊಳ್ಳಲಿದೆ.

ಪುರಾಣದ ಪ್ರಕಾರ ಶ್ರೀರಾಮನು ಸೀತಾದೇವಿಯನ್ನು ಹುಡುಕಲು ಲಂಕೆಗೆ ತೆರಳುತ್ತಿದ್ದಾಗ ತುಂಗಭದ್ರೆಯ ತಟದಲ್ಲಿಯೇ ಆಶ್ರಯ ಪಡೆದಿದ್ದ. ಮರ್ಯಾದಾ ಪುರುಷೋತ್ತಮ ಹಾಗೂ ಸಂತರ ಪಾದಸ್ಪರ್ಶದಿಂದ ಪಾವನಗೊಂಡಿರುವ ನೆಲದಲ್ಲಿ ವಿಶಿಷ್ಟ ಮೂರ್ತಿಯೊಂದು ಪ್ರತಿಷ್ಠಾಪನೆಗೊಳ್ಳುತ್ತಿರುವುದು ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಇದರಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಇನ್ನಷ್ಷು ಉತ್ತೇಜನ ದೊರೆಯಲಿದೆ.

ಹೈದರಾಬಾದ್‌ನ ಜೈಶ್ರೀರಾಮ ಫೌಂಡೇಷನ್‌ ₹ 300 ಕೋಟಿ ವೆಚ್ಚದಲ್ಲಿ 10 ಎಕರೆ ಪ್ರದೆಶದಲ್ಲಿ ಶ್ರೀರಾಮನ ಪ್ರತಿಮೆ ಹಾಗೂ ಥೀಮ್‌ ಪಾರ್ಕ್‌ ನಿರ್ಮಾಣ ಮಾಡಲಿದೆ. ಗುಜರಾತ್‌ನ ಕೆವಾಡಿಯಾದಲ್ಲಿ ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತೆಯ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಶಿಲ್ಪಿ ರಾಮ್ ವಾಂಜಿ ಸುತಾರ್ ಅವರಿಗೆ ಪ್ರತಿಮೆ ಸಿದ್ಧಪಡಿಸುವ ಹೊಣೆ ವಹಿಸಲಾಗಿದೆ.

ADVERTISEMENT

2023ರ ಜುಲೈ 23ರಂದು ಕೇಂದ್ರ ಗೃಹ ಸಚಿವ ಅಮಿತ್ ಮಂತ್ರಾಲಯದಲ್ಲಿ ಶ್ರೀರಾಮನ ಪ್ರತಿಮೆ ಸ್ಥಾಪನೆಗೆ ವರ್ಚುವಲ್ ಮೋಡ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮಂತ್ರಾಲಯ ಮಠದ ಮಠಾಧೀಶ ಸುಬುದೇಂದ್ರ ತೀರ್ಥ ಸ್ವಾಮೀಜಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿಕೊಟ್ಟಿದ್ದಾರೆ. ಈ ಯೋಜನೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು 10 ಎಕರೆ ಜಾಗವನ್ನು ರಾಮಮಂದಿರ ನಿರ್ಮಾಣಕ್ಕಾಗಿಯೇ ದೇಣಿಗೆ ನೀಡಿರುವುದು ವಿಶೇಷ.

ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಆಂಧ್ರಪ್ರದೇಶದ ತಿರುಮಲ್‌ ತಿರುಪತಿ ದೇವಸ್ಥಾನ, ವರಾಹಲಕ್ಷ್ಮಿ ನರಸಿಂಹ ಸ್ವಾಮಿ, ಉತ್ತರಪ್ರದೇಶದ ವಾರಣಾಸಿಯ ಕಾಶಿ, ಉತ್ತರಖಂಡದ ಬದರಿನಾಥ, ಕೇರಳದ ಅನಂತಪದ್ಮನಾಭ ಸ್ವಾಮಿ, ತೆಲಂಗಾಣದ ಬಾಸರದಾ ಶ್ರೀಜ್ಞಾನ ಸರಸ್ವತಿ, ಮಡಿಕೇರಿಯ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ, ತಮಿಳುನಾಡಿನ ಮುಶನಂ ವರಾಹಸ್ವಾಮಿ, ಮಹಾರಾಷ್ಟ್ರದ ಪಂಡರಪುರದ ವಿಠ್ಠಲ ರುಕ್ಮಾಯಿ ಮಂದಿರಗಳ ಮಾದರಿ ದೇಗುಲ ನಿರ್ಮಾಣದ ಪ್ರಸ್ತಾಪವೂ ಇದೆ.

‘ರಾಮನ ಅವತಾರವೆಂದೇ ನಂಬಲಾದ ದೇಶದ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿರುವ ಒಂಬತ್ತು ಮಂದಿರಗಳು ಶ್ರೀರಾಮನ ಕಂಚಿನ ಪ್ರತಿಮೆಯ ಸುತ್ತಲೂ ನಿರ್ಮಾಣಗೊಳ್ಳಲಿವೆ. ಆಯಾ ಪ್ರದೇಶದ ವಾಸ್ತುಶಿಲ್ಪ ಹಾಗೂ ದೇವರಮೂರ್ತಿಗಳು ಇಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ’ ಎಂದು ಫೌಂಡೇಷನ್‌ ಸಂಸ್ಥಾಪಕ ಶ್ರೀಧರ್‌ ಎಂ.ಪಿ. ವಿವರಿಸುತ್ತಾರೆ.

ಧರ್ಮ ರಕ್ಷಣೆ ಪ್ರತಿಷ್ಠಾನದ ಉದ್ದೇಶ: ವಿಶ್ವದಾದ್ಯಂತ ಹಿಂದೂ ಸನಾತನದ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಜೈ ಶ್ರೀ ರಾಮ ಫೌಂಡೇಷನ್‌ ಅಸ್ತಿತ್ವಕ್ಕೆ ಬಂದಿದೆ.

ರಾಷ್ಟ್ರದಾದ್ಯಂತ ಹಿಂದೂ ದೇವಾಲಯವನ್ನು ರಕ್ಷಿಸಿ ಡಿಜಿಟಲ್ ಮಾಡಿ ಧರ್ಮ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಿತ್ತರಿಸುವ ಸಂಕಲ್ಪ ಮಾಡಿದೆ. ಹಿಂದೂ ಧರ್ಮವನ್ನು ಉತ್ತೇಜಿಸುವುದಕ್ಕಾಗಿಯೇ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

‘ಪ್ರತಿಯೊಬ್ಬನೂ ಶ್ರೀರಾಮನ ದರ್ಶನ ಪಡೆಯಬೇಕು ಎನ್ನುವುದು ಪ್ರತಿಷ್ಠಾನದ ಉದ್ದೇಶವಾಗಿದೆ. ದೇಶದ ಪ್ರಾಚೀನ ಇತಿಹಾಸವನ್ನು ಪರಿಚಯಿಸುವ ದಿಸೆಯಲ್ಲಿ ಡಿಜಿಟಲ್‌ ಚಾನೆಲ್‌ ಕಾರ್ಯ ಮಾಡುತ್ತಿದೆ’ ಎಂದು ಫೌಂಡೇಷನ್‌ ಸಂಸ್ಥಾಪಕ ಶ್ರೀಧರ ಎಂ.ಪಿ. ವಿವರಿಸುತ್ತಾರೆ.

ರಾಯಚೂರು ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಅನುಷ್ಠಾನಗೊಳ್ಳಲಿರುವ ಪಂಚಲೋಹದ 108 ಅಡಿ ಎತ್ತರದ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಯೋಜನೆಯ ನೀಲನಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.