ADVERTISEMENT

ತೃತೀಯ ಲಿಂಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಲಿ

ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ ಆಶ್ವತ್ಥಾಮ ಅಭಿಪ್ರಾಯ

ಬಸವರಾಜ ಬೋಗಾವತಿ
Published 24 ನವೆಂಬರ್ 2022, 5:10 IST
Last Updated 24 ನವೆಂಬರ್ 2022, 5:10 IST
ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿರುವ ನೀರಮಾನ್ವಿ ಗ್ರಾಮದ ಅಶ್ವತ್ಥಾಮ(ಪೂಜಾ) ಅವರನ್ನು ಸಂಘ–ಸಂಸ್ಥೆಗಳ ಮುಖಂಡರು ಸನ್ಮಾನಿಸಿದರು
ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿರುವ ನೀರಮಾನ್ವಿ ಗ್ರಾಮದ ಅಶ್ವತ್ಥಾಮ(ಪೂಜಾ) ಅವರನ್ನು ಸಂಘ–ಸಂಸ್ಥೆಗಳ ಮುಖಂಡರು ಸನ್ಮಾನಿಸಿದರು   

ಮಾನ್ವಿ: ‘ಸಮಾಜದಲ್ಲಿ ತೃತೀಯ ಲಿಂಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಸರ್ಕಾರವು ಹೆಚ್ಚಿನ ಸೌಲಭ್ಯ ಕಲ್ಪಿಸುವ ಮೂಲಕ ತೃತೀಯ ಲಿಂಗಿಗಳನ್ನು ಮುಖ್ಯವಾಹಿನಿಗೆ ತರಬೇಕು’.

ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ ತಾಲ್ಲೂಕಿನ ನೀರಮಾನ್ವಿ ಗ್ರಾಮದ ತೃತೀಯ ಲಿಂಗಿ ಆಶ್ವತ್ಥಾಮ (ಪೂಜಾ) ಅವರ ಅಭಿಪ್ರಾಯವಿದು.

ರಾಜ್ಯ ಸರ್ಕಾರ ಈಚೆಗೆ ಪ್ರಕಟಿಸಿದ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಯ ಆಯ್ಕೆ ಪಟ್ಟಿಯಲ್ಲಿ ತೃತೀಯ ಲಿಂಗಿಗಳಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಿದ್ದು, ನೀರಮಾನ್ವಿ ಗ್ರಾಮದ ಆಶ್ವತ್ಥಾಮ (ಪೂಜಾ) ಸಮಾಜ ವಿಜ್ಞಾನ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದಾರೆ.

ADVERTISEMENT

ನೀರಮಾನ್ವಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಮಾನ್ವಿ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ, ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. ರಾಯಚೂರಿನ ನವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ, ಸಿಂಧನೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ ಇತಿಹಾಸ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.

ದೈಹಿಕವಾಗಿ ಗಂಡಾಗಿದ್ದರೂ ವರ್ತನೆಗಳು ಹೆಣ್ಣುಮಕ್ಕಳಂತೆ ಇದ್ದ ಕಾರಣ ಬಾಲ್ಯದಿಂದಲೇ ಸಹಪಾಠಿಗಳು ಹಾಗೂ ಸುತ್ತಮುತ್ತಲಿನ ಜನರ ಚುಚ್ಚು ಮಾತುಗಳಿಂದ ತೀವ್ರ ನೋವು ಅನು ಭವಿಸಿದ್ದನ್ನು ಅಶ್ವತ್ಥಾಮ ನೆನಪಿಸಿಕೊಳ್ಳು ತ್ತಾರೆ. ಬೆಂಗಳೂರಿಗೆ ತೆರಳಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ನಂತರ ಸುಮಾರು ಆರು ವರ್ಷಗಳ ಕಾಲ ಇತರ ಮಂಗಳಮುಖಿಯರ ಜತೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸಿದ್ದಾಗಿ ಅವರು ತಿಳಿಸಿದರು.

‘ತೃತೀಯ ಲಿಂಗಿಗಳಿಗೆ ಉದ್ಯೋಗದಲ್ಲಿ ಶೇ1ರಷ್ಟು ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಸರ್ಕಾರಿ ಉದ್ಯೋಗ ಪಡೆಯಬೇಕೆನ್ನುವ ಛಲ ಮೂಡಿತು. ಕಾರಣ ಕಳೆದ ಮೇ ತಿಂಗಳಲ್ಲಿ ಶಿಕ್ಷಕರ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾಗಿದ್ದೇನೆ. ನನ್ನಂತೆ ಉತ್ತಮ ಶಿಕ್ಷಣ ಪಡೆದಿರುವ ಇತರ ಮಂಗಳಮುಖಿಯರಿಗೆ ಸರ್ಕಾರಿ ಹುದ್ದೆಗಳನ್ನು ಪಡೆಯಲು ಮಾರ್ಗದರ್ಶನ ನೀಡುವೆ’ ಎಂದು ಅಶ್ವತ್ಥಾಮ ಹೇಳಿದರು.

ಸರ್ಕಾರಿ ಶಾಲಾ ಶಿಕ್ಷಕನಾಗಬೇಕೆನ್ನುವ ಅಶ್ವತ್ಥಾಮನ ಗುರಿ ಈಡೇರಿರುವುದು ಖುಷಿ ತಂದಿದೆ. ಈ ಸಾಧನೆಗೆ ಅವನ ಕಠಿಣ ಪರಿಶ್ರಮವೇ ಕಾರಣ-ಯಲ್ಲಮ್ಮ, ಆಶ್ವತ್ಥಾಮ(ಪೂಜಾ) ತಾಯಿ

ಅಶ್ವತ್ಥಾಮ ತೃತೀಯ ಲಿಂಗಿ ಕೋಟಾದಲ್ಲಿ ಶಿಕ್ಷಕ ಹುದ್ದೆಗೆ ಆಯ್ಕೆಯಾಗುವ ಮೂಲಕ ಮುಖ್ಯ ವಾಹಿನಿಗೆ ಬಂದಿದ್ದಾರೆ. ಇದರಿಂದ ಇತರ ತೃತೀಯ ಲಿಂಗಿಗಳು ಉನ್ನತ ಶಿಕ್ಷಣ, ಸರ್ಕಾರಿ ಹುದ್ದೆ ಪಡೆಯಲು ಪ್ರೇರಣೆ ಮತ್ತು ಆತ್ಮ ವಿಶ್ವಾಸ ಮೂಡಲು ಸಾಧ್ಯ.- ಚಂದ್ರಶೇಖರ ದೊಡ್ಡಮನಿ, ಕ್ಷೇತ್ರ ಶಿಕ್ಷಣಾಧಿಕಾರಿ, ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.