ರಾಯಚೂರು: ಅಡುಗೆ ಕೆಲಸ ಮಾಡುವವರನ್ನು ಕೀಳಾಗಿ ಕಾಣುವಂಥ ಮನೋಭಾವನೆ ಕೈಬಿಡಬೇಕು. ಅಂಥ ಮನೋಭಾವನೆ ಇರಬಾರದು ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.
ನಗರದ ಶ್ರೀರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ವಿಭಾಗದ ಅಡುಗೆದಾರರ ಸಂಘದ ಎರಡನೇ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದರು.
ಅಡುಗೆ ಮಾಡುವುದು ಪುಣ್ಯದ ಕಾರ್ಯವಾಗಿದೆ. ಐಟಿ, ಬಿಟಿ ಸೇರಿದಂತೆ ವಿವಿಧೆಡೆ ಅಡುಗೆ ಕಾರ್ಯನಿರ್ವಹಿಸುವವರನ್ನು ನೇಮಕ ಮಾಡಿಕೊಳ್ಳುತ್ತಾರೆ. ಅಡುಗೆ ಮಾಡುವವರದ್ದು ಅನ್ನದಾನ ಮಾಡುವ ಮಹಾನ್ ಕಾರ್ಯವಾಗಿದೆ ಎಂದು ಹೇಳಿದರು.
‘ಭೀಮಸೇನ ದೇವರು ಅಜ್ಞಾತ ವಾಸದಲ್ಲಿ ಅಡುಗೆ ಮಾಡುವವರಾದ ಪ್ರಸಂಗ ನಮಗೆಲ್ಲ ತಿಳಿದಿರುವ ವಿಷಯವಾಗಿದೆ. ಅಡುಗೆ ಮಾಡುವವರರ ಕುಟುಂಬದ ಸದಸ್ಯರು ತಮ್ಮ ಮನೆ ಯಜಮಾನ ಮಾಡುತ್ತಿರುವ ಕೆಲಸದ ಬಗ್ಗೆ ಕೀಳಾಗಿ ಕಾಣಬಾರದು. ಸ್ವಾಭಿಮಾನದಿಂದ ಅಡುಗೆ ಕೆಲಸ ಮಾಡುತ್ತಿರುವ ಬಗ್ಗೆ ಹೇಳಿಕೊಳ್ಳಿ. ಸ್ವಾವಲಂಬಿಯಾಗಬೇಕು ಎಂದು ತಿಳಿಸಿದರು.
ಅಡುಗೆ ಮಾಡುವುದರಿಂದ ದೇಹಕ್ಕೆ ದಣಿವು ಆಗುವುದು. ಒಲೆಯ ಮುಂದೆ ಕುಳಿತು ಹೊಗೆ ಮತ್ತು ಬೆಂಕಿಯ ಝಳದಲ್ಲಿ ಕಷ್ಟ್ಟ ಅನುಭವಿಸಿ ರುಚಿಯಾದ ಅಡುಗೆ ಸಿದ್ಧಪಡಿಸುವುದು ಸುಲಭದ ಮಾತಲ್ಲ. ಅಡುಗೆ ಮಾಡುವವರ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅಡುಗೆಯವರಿಗೆ ನೆರವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಸಂಘಕ್ಕೆ ಒಂದು ಲಕ್ಷ ಧನ ಸಹಾಯ ಮಾಡಲಾಗುವುದು ಎಂದು ಹೇಳಿದರು.
ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಮಾತನಾಡಿ, ಮಂಡಳಿ ಅಧ್ಯಕ್ಷನಾದ ಮೇಲೆ ರಾಜ್ಯ ಪ್ರವಾಸ ಮಾಡಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಅಡುಗೆದಾರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ ಎಚ್.ಕೆ. ಮಾತನಾಡಿದರು. ಆರ್.ಡಿ.ಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಬಿಜೆಪಿ ಮುಖಂಡ ಚನ್ನಪ್ಪಗೌಡ, ನಗರಸಭೆ ಸದಸ್ಯ ಈ.ಶಶಿರಾಜ, ಕಡಗೋಲ ಆಂಜನೇಯ, ಮಂಡಳಿಯ ನಿರ್ದೇಶಕ ಜಗನ್ನಾಥ ಕುಲಕರ್ಣಿ, ಎಚ್ಪಿಐಎಲ್ ಸ್ವತಂತ್ರ ನಿರ್ದೇಶಕ ಗಿರೀಶ ಕನಕವೀಡು, ಅರವಿಂದ ಕುಲಕರ್ಣಿ, ವತ್ಸಲಾ ನಾಗೇಶ, ಪವನ್, ಜಗದೀಶ ಹುನಗುಂದ,ಅಡುಗೆದಾರರ ಸಂಘದ ಪದಾಧಿಕಾರಿಗಳಾದ ಅನಿಲ ಅಷ್ಟಗಿ, ಗುರುರಾಜ ಚಳ್ಳಾರಿ, ಕುರ್ಡಿ ಲಕ್ಷ್ಮಣಾಚಾರ್, ಕೃಷ್ಣಮೂರ್ತಿ ಮತ್ತಿತರರಿದ್ದರು. ಮುರಳೀಧರ ಕುಲಕರ್ಣಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.