ADVERTISEMENT

ರಾಯಚೂರು | ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ತರೋಣ

ಜಿಲ್ಲಾ ಕಾಂಗ್ರೆಸ್‌ ಹಿರಿಯ ಮುಖಂಡ ಸಿದ್ದನಗೌಡ ದರೂರ ಕರೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 13:52 IST
Last Updated 2 ಜುಲೈ 2020, 13:52 IST
ಕೆಪಿಸಿಸಿ ಅದ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ಪದಗ್ರಹಣ ಮಾಡಿದ ನಿಮಿತ್ತ ಪಕ್ಷದ ಮುಖಂಡ ಯಂಕಣ್ಣ ಯಾದವ ಅವರು ರಾಯಚೂರಿನಲ್ಲಿ ಹೋಟೆಲ್‌ ಬೃಂದಾವನ ಬಯಲು ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯಕರ್ತರೆಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು
ಕೆಪಿಸಿಸಿ ಅದ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ಪದಗ್ರಹಣ ಮಾಡಿದ ನಿಮಿತ್ತ ಪಕ್ಷದ ಮುಖಂಡ ಯಂಕಣ್ಣ ಯಾದವ ಅವರು ರಾಯಚೂರಿನಲ್ಲಿ ಹೋಟೆಲ್‌ ಬೃಂದಾವನ ಬಯಲು ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯಕರ್ತರೆಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು   

ರಾಯಚೂರು: ಕೋವಿಡ್‌ನಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯದಲ್ಲಿ ಸ್ಪಂದನೆ ನೀಡದ ಪಕ್ಷ ಆಡಳಿತ ನಡೆಸುತ್ತಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಪಕ್ಷದ ಹಿರಿಯ ಮುಖಂಡ ಸಿದ್ದನಗೌಡ ದರೂರ ಕರೆ ನೀಡಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ರಾಜ್ಯ ಅದ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅವರು ಪದಗ್ರಹಣ ಮಾಡಿದನಿಮಿತ್ತ ಪಕ್ಷದ ಮುಖಂಡ ಯಂಕಣ್ಣ ಯಾದವ ಅವರು ನಗರದ ಹೋಟೆಲ್‌ ಬೃಂದಾವನ ಬಯಲು ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರವು ಜನರನ್ನು ಮಂದಮತಿ ಮಾಡಿದೆ. ಬರೀ ಡಂಬಾಚಾರದಿಂದ ಮಾತನಾಡುವ ಕಲೆ ಅವರಿಗೆ ಗೊತ್ತಿದೆ. ಜನರ ಸೇವೆಗಾಗಿ ಹುಟ್ಟುಕೊಂಡಿರುವ ಕಾಂಗ್ರೆಸ್‌ಗೆ ತನ್ನದೇ ಆದ ಇತಿಹಾಸವಿದೆ. ಸದ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತಿದ್ದು, ಪ್ರತಿಯೊಬ್ಬರೂ ‍ಪಕ್ಷದ ವಿಚಾರವನ್ನು ನಂಬಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ADVERTISEMENT

ಕಾಂಗ್ರೆಸ್‌ನಲ್ಲಿಯೆ ಬೆಳೆದಿದ್ದ ಕೆಲವು ನಾಯಕರು ಪಕ್ಷಕ್ಕೆ ದ್ರೋಹ ಮಾಡಿದ್ದರಿಂದ ಅಧಿಕಾರ ಕಳೆದುಕೊಳ್ಳುವ ಪ್ರಸಂಗ ಎದುರಾಗಿದೆ. ಇಂಥವರಿಂದಾಗಿಯೇ ಪಕ್ಷವು ಸ್ವಲ್ಪ ಹಿಂದುಳಿದಿದೆ. ಮತ್ತೆ ಮೈ ಕೊಡವಿಕೊಂಡು ಮೇಲೆಳಬೇಕು. ಪಕ್ಷದಲ್ಲಿ ನಿಷ್ಠೆಯಿಂದ ದುಡಿಯುವವರಿಗೆ ಚುನಾವಣೆ ಟಿಕೆಟ್‌ ನೀಡಬೇಕು ಎಂದರು.

ದೇಶದಲ್ಲಿ ಒಂದು ಕಡೆ ಕೊರೊನಾ ಹಾವಳಿ ಇದೆ. ಇನ್ನೊಂದು ಕಡೆ, ಚೀನಾ ದೇಶವು ಯುದ್ಧಕ್ಕೆ ನಿಂತಿದೆ. ಇದರಿಂದ ಭೀತಿ ಸೃಷ್ಟಿಯಾಗಿದ್ದರೂ, ಕೇಂದ್ರ ಸರ್ಕಾರವು ಅಕ್ಕಿ, ಗೋಧಿ ನೀಡುವುದಾಗಿ ಹೇಳುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಮುಖಂಡ ಯಂಕಣ್ಣ ಯಾದವ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾಗುತ್ತಿರುವ ಡಿ.ಕೆ. ಶಿವಕುಮಾರ್‌ ಸಮರ್ಥ ನಾಯಕರು. ಅವರ ಮಾರ್ಗದರ್ಶನದಲ್ಲಿ ಪಕ್ಷವು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಯಕರ್ತರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. 40 ಕುಷ್ಠರೋಗಿಗಳಿಗೆ ಆಹಾರಧಾನ್ಯ, ಹಣ್ಣು–ಹಂಪಲು ವಿತರಿಸಲಾಯಿತು.

ಕಾಂಗ್ರೆಸ್‌ ಹಿರಿಯ ನಾಯಕಿ ರಾಣಿ ರಿಚರ್ಡ್ಸ್, ವೀರಣ್ಣ ಮಟಮಾರಿ, ಮಲ್ಲಿಕಾರ್ಜುನ ಹೊಸೂರ, ಮೊಹ್ಮದ್‌ ಫಿರೋಜ, ರಹಮತ್‌ ಬೇಗಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.