ADVERTISEMENT

ರಾಯಚೂರು: ಗಮನ ಸೆಳೆದ ಕಾಂಗ್ರೆಸ್‌ ಸ್ವಾತಂತ್ರ್ಯ ನಡಿಗೆ

ರಾಯಚೂರು ನಗರ ಹಾಗೂ ಗಿಲ್ಲೇಸುಗೂರಿನಲ್ಲಿ ರಾರಾಜಿಸಿದ ರಾಷ್ಟ್ರಧ್ವಜಗಳು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 15:46 IST
Last Updated 9 ಆಗಸ್ಟ್ 2022, 15:46 IST
ರಾಯಚೂರು ತಾಲ್ಲೂಕಿನ ಗಿಲ್ಲೇಸುಗೂರು ಗ್ರಾಮದಿಂದ ಯರಗೇರಾವರೆಗೂ ಕಾಂಗ್ರೆಸ್‌ನಿಂದ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಯ ನೋಟ.
ರಾಯಚೂರು ತಾಲ್ಲೂಕಿನ ಗಿಲ್ಲೇಸುಗೂರು ಗ್ರಾಮದಿಂದ ಯರಗೇರಾವರೆಗೂ ಕಾಂಗ್ರೆಸ್‌ನಿಂದ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಯ ನೋಟ.   

ರಾಯಚೂರು: ಸ್ವಾತಂತ್ರ್ಯದ ಅಮೃತ ಅಮಹೋತ್ಸವ ನಿಮಿತ್ತ ರಾಯಚೂರು ನಗರದಲ್ಲಿ ಹಾಗೂ ರಾಯಚೂರು ತಾಲ್ಲೂಕಿನ ಗಿಲ್ಲೇಸುಗೂರು ಗ್ರಾಮದಿಂದ ಯರಗೇರಾವರೆಗೂ ಕಾಂಗ್ರೆಸ್‌ ಪಕ್ಷದಿಂದ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಯು ಜನರ ಗಮನ ಸೆಳೆಯಿತು.

ರಾಯಚೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಆರಂಭವಾದ ಸ್ವಾತಂತ್ರ್ಯ ನಡಿಗೆಯು ವಿವಿಧ ಬಡಾವಣೆಗಳ ಮೂಲಕ ಸಂಚರಿಸಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ, ಆನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಪಕ್ಷವು ತ್ಯಾಗ, ಬಲಿದಾನ ನೀಡಿರುವ ಇತಿಹಾಸವಿದೆ. ಸಂವಿಧಾನ ರೂಪಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ. ಆದರೆ ಬಿಜೆಪಿಯವರು ಸಂವಿಧಾನ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ ಎಂದರು.

ADVERTISEMENT

ಬಿಜೆಪಿ ಸರ್ಕಾರವು ಬಡವರನ್ನು ಬೆಲೆ ಏರಿಕೆ ಸಂಕಷ್ಟಕ್ಕೆ ನೂಕಿ, ಕಾರ್ಪೋರೇಟ್‌ ಶಕ್ತಿಗಳಿಗೆ ಸಾಲಮನ್ನಾ ಮಾಡುತ್ತಿದೆ. ದೇಶದಲ್ಲಿ ಯಾರೊಬ್ಬರಿಗೂ ನೆಮ್ಮದಿ ನೀಡುವುದಕ್ಕೆ ಈ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ರೈತರು, ಕಾರ್ಮಿಕರು ಮತ್ತು ಮಹಿಳೆಯರ ಹಿತರಕ್ಷಣೆ ಕಡೆಗಣಿಸಲಾಗಿದೆ. ನಿರುದ್ಯೋಗ ಸಮಸ್ಯೆ ವಿಪರೀತವಾಗಿದೆ ಎಂದು ತಿಳಿಸಿದರು.

ಜಾತಿ, ಧರ್ಮಗಳ ಹೆಸರಿನಲ್ಲಿ ಜನರನ್ನು ವಿಭಜಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದೇಶವನ್ನು ಯುವ ಜನರಿಗೆ ಮನವರಿಕೆ ಮಾಡುವ ಉದ್ದೇಶಕ್ಕಾಗಿ ಪ್ರತಿ ಜಿಲ್ಲೆಯಲ್ಲಿ 75 ಕಿಮೀ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ, ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ.ನಾಯಕ, ಮುಖಂಡರಾದ ಎ.ವಸಂತಕುಮಾರ್‌, ಹಂಪನಗೌಡ ಬಾದರ್ಲಿ, ರಾಮಣ್ಣ ಇರಬಗೇರಾ, ರವಿ ಬೋಸರಾಜ, ಪಾಮಯ್ಯ ಮುರಾರಿ, ರುದ್ರಪ್ಪ ಅಂಗಡಿ ಮತ್ತಿತರರು ಇದ್ದರು.

ಗಿಲ್ಲೇಸುಗೂರಿನಿಂದ–ಯರಗೇರಾ: ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗಿಲ್ಲೇಸುಗೂರು ಗ್ರಾಮದಿಂದ ಯರಗೇರಾ ಗ್ರಾಮದವರೆಗೂ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ನಡೆಸಲಾಯಿತು.

ಶಾಸಕ ಬಸವನಗೌಡ ದದ್ದಲ ಪಾದಯಾತ್ರೆ ನೇತೃತ್ವ ವಹಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕಾಂಗ್ರೆಸ್‌ ಉಸ್ತುವಾರಿ ಶ್ರೀಧರಬಾಬು, ವಿಧಾನ ಪರಿಷತ್‌ ಸದಸ್ಯ ಶರಣಗೌಡ ಬಯ್ಯಾಪುರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ, ಕೆ.ಪಂಪಾಪತಿ ಹಾಗೂ ಮುಖಂಡರೆಲ್ಲರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.