ADVERTISEMENT

ಸೋಂಕು ಹರಡದಂತೆ ಕ್ರಮಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 14:01 IST
Last Updated 23 ಜೂನ್ 2020, 14:01 IST
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್‌ ಸೋಂಕು ಕುರಿತು ಮಂಗಳವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್‌ ಸೋಂಕು ಕುರಿತು ಮಂಗಳವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು   

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುವ ಲಕ್ಷ್ಮಣ ಇವೆ. ಇದು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತವು ಪೂರ್ವಯೋಜನೆ ಮಾಡಿಟ್ಟುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೋವಿಡ್‌ ಕುರಿತ ಪರಿಶೀಲನೆ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಅಂತರ ಪಾಲನೆ ಹಾಗೂ ಮಾಸ್ಕ್ ಧರಿಸುವುದು ನಿಯಮ ಅನುಷ್ಠಾನಆಗುತ್ತಿದೆಯೋ ಇಲ್ಲವೋ ಎಂಬುದರ ಮೇಲೆ ನಿಗಾ ವಹಿಸುವುದು ಪೊಲೀಸರ ಜವಾಬ್ದಾರಿ. ಬೈಕ್‌ ಮೇಲೆ ಕಡ್ಡಾಯವಾಗಿ ಒಬ್ಬರೇಸಂಚರಿಸಬೇಕು. ಕಾರಿನಲ್ಲಿ ಅಂತರ ಪಾಲನೆ ಅನಿವಾರ್ಯ. ನಿಯಮ ಪಾಲನೆ ಮಾಡದವರಿಗೆ ಹೇಗೆ ಮನವರಿಕೆ ಮಾಡಬೇಕು ಎನ್ನುವ ವಿಷಯವನ್ನು ಜಿಲ್ಲಾಡಳಿತ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದರು.

ADVERTISEMENT

ಕಳಪೆ ಬೀಜದ ವಿರುದ್ಧ ಕ್ರಮ: ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರ ಒದಗಿಸಬೇಕು. ಕಳಪೆ ಬೀಜ ವಿತರಣೆ ಆಗದಂತೆ ಎಚ್ಚರಿಕೆ ವಹಿಸಬೇಕು. ಬೀಜ ಹಾಕಿದ ಮೇಲೆ ಅದರ ಫಲಿತಾಂಶ ಹೇಗಿರುತ್ತದೆ ಎಂಬುದು ಮುಖ್ಯ. ಬೀಜ ವಿತರಿಸುವ ಎಲ್ಲ ಡೀಲರ್‌ಗಳಿಂದ ಪಟ್ಟಿ ಪಡೆಯಬೇಕು. ಕೃಷಿ ಇಲಾಖೆ ಜಂಟಿ ಅಧಿಕಾರಿ ಪ್ರತಿ ತಾಲ್ಲೂಕಿಗೆ ಹೋಗಿ ಸಭೆಗಳನ್ನು ನಡೆಸಬೇಕು ಎಂದು ಸೂಚಿಸಿದರು.

ಗೊಬ್ಬೂರು, ಕುರ್ಡಿ, ಮದುಗಲ್ ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣ ಮಾಡಬೇಕು. ಶುದ್ಧ ನೀರಿನ ಘಟಕಗಳದ್ದು ರಾಜ್ಯಮಟ್ಟದಲ್ಲೇ ಸಮಸ್ಯೆ ಕಂಡುಬಂದಿವೆ.ಕುಡಿಯುವ ನೀರಿನ ವಿಷಯ ಚರ್ಚೆಗೆ ಪ್ರತ್ಯೇಕ ಸಭೆ ಮುಂದಿನ‌ವಾರ ಏರ್ಪಡಿಸಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಡಿ ಎಷ್ಟು ಕೊಳವೆಬಾವಿ ಕೊರೆಯಲಾಗಿದೆ.ವಿದ್ಯುತ್‌ ಸಂಪರ್ಕ ಕಲ್ಪಿಸಿರುವುದು ಹಾಗೂ ಮೋಟರ್‌ಪಂಪ್‌ ಅಳವಡಿಸಿದ್ದರ ಬಗ್ಗೆ ವರದಿಯೊಂದನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಸಮುದಾಯಕ್ಕೆ ಕೋವಿಡ್ ಹಬ್ಬಿದೆಯೋ ಎಲ್ಲವೋ ಎಂಬುದನ್ನು ಸ್ಪಷ್ಟವಾಗಿ ಅಧಿಕಾರಿಗಳು ಪತ್ತೆ ಮಾಡಬೇಕು. ಈ ಬಗ್ಗೆ ಜನರು ಹೇಗೆ ಏನು ಜಾಗೃತಿ ವಹಿಸಬೇಕು ಎಂಬುದನ್ನು ಪ್ರಚಾರ ಮಾಡಬೇಕು. ಮಾಸ್ಕ್ ಇಲ್ಲದವರ ಬೈಕ್ ಚಕ್ರದ ಗಾಳಿ ತೆಗೆಯಿರಿ ಎಂದು ಸಲಹೆ ನೀಡಿದರು.

ಸಂಸದ ರಾಜಾ ಅಮರೇಶ್ವರ ಮಾತನಾಡಿ, ಜನಸಂದಣಿ ಇರುವ ಕಡೆಗಳಲ್ಲಿ ಮುನ್ನಚ್ಚರಿಕೆ ಅಗತ್ಯ. ಸ್ಥಳೀಯ ಸಂಸ್ಥೆಗಳು ಅನುದಾನ ಸಮರ್ಪಕವಾಗಿ ಬಳಕೆ ಮಾಡಿಲ್ಲ. ಶುಚಿತ್ವ ನಿರ್ವಹಣೆ ಮಾಡುತ್ತಿಲ್ಲ. ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳು ಕಾಳಜಿ ತೆಗೆದುಕೊಳ್ಳುತ್ತಿಲ್ಲ. ಜಿಲ್ಲಾಡಳಿತ ಇವುಗಳನ್ನು ಸರಿಪಡಿಸಬೇಕು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಬಿದ್‌ ಅವರು ಜಿಲ್ಲೆಯಲ್ಲಿ ಬಿದ್ದಿರುವ ಮಳೆ, ಬೀಜ ಮತ್ತು ಗೊಬ್ಬರ ಸಂಗ್ರಹ ಮತ್ತು ವಿತರಣೆ ವಿವರ ಒದಗಿಸಿದರು.

ಸಂಸದ ಕರಡಿ ಸಂಗಣ್ಣ, ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಶಿವನಗೌಡ ನಾಯಕ, ಡಿ.ಎಸ್‌.ಹುಲಗೇರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಮಾತನಾಡಿದರು.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಗಣಪತಿ ಸಾಕರೆ, ಜೆಸ್ಕಾಂ ಎಂಜಿನಿಯರ್‌ ರಾಜೇಶ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.