
ಸಿಂಧನೂರು: ‘ತುಂಗಭದ್ರಾ ಡ್ಯಾಂನ 32 ಕ್ರಸ್ಟ್ಗೇಟ್ಗಳ ಅಳವಡಿಕೆಗಾಗಿ ₹ 52 ಕೋಟಿ ವೆಚ್ಚದಲ್ಲಿ ಗುಜರಾತ್ನ ಕಂಪನಿಗೆ ಟೆಂಡರ್ ಕೊಡಲಾಗಿದೆ. ಆದರೆ ಇದುವರೆಗೆ ₹ 11 ಕೋಟಿ ಬಿಲ್ ಸಹ ಪಾವತಿಸಿಲ್ಲ. ಇದನ್ನು ಗಮನಿಸಿದರೆ ನಿಜವಾಗಿಯೂ ಸರ್ಕಾರಕ್ಕೆ ಗೇಟ್ಗಳ ನಿರ್ಮಾಣ ಮತ್ತು ಈ ಭಾಗದ ರೈತರ ಬಗ್ಗೆ ಕಾಳಜಿ ಇದೆಯೇ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ನಗರದ ಎಪಿಎಂಸಿ ಪ್ರಾಂಗಣದಲ್ಲಿ ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳ ಪಕ್ಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಂಗಳವಾರ ಹಮ್ಮಿಕೊಂಡಿದ್ದ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ರೈತರ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಇಲ್ಲಿನ ಕಾಂಗ್ರೆಸ್ ಸರ್ಕಾರ ದಪ್ಪ ಚರ್ಮ ಹೊಂದಿದೆ. ತೆಲಂಗಾಣ ಕಾಂಗ್ರೆಸ್ ಸರ್ಕಾರದ ಎಂಎಸ್ಪಿ ಜೊತೆಗೆ ₹ 500 ಪ್ರೋತ್ಸಾಹ ಧನ ನೀಡಿ ಭತ್ತ ಖರೀದಿಸುತ್ತಿದೆ. ಕರ್ನಾಟಕ ಸರ್ಕಾರ ಇನ್ನೂ ಖರೀದಿ ಕೇಂದ್ರಗಳನ್ನೇ ತೆರೆದಿಲ್ಲ. ತೊಗರಿ, ಹತ್ತಿ, ಜೋಳ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ಕುರ್ಚಿಗೆ ಗುದ್ದಾಟ ನಡೆಸಿದ್ದಾರೆ’ ಎಂದರು.
‘ನವಲಿ ಜಲಾಶಯ ನಿರ್ಮಾಣಕ್ಕಾಗಿ ಕುಮಾರಣ್ಣ ಸಿಎಂ ಇದ್ದಾಗ ಡಿಪಿಆರ್ ತಯಾರಿಸಿದ್ದರು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ತಲೆ ಕೆಡಿಸಿಕೊಳ್ಳದೆ ಮೌನ ವಹಿಸಿರುವುದರ ಹಿಂದಿನ ಉದ್ದೇಶವೇನು’ ಎಂದು ದೂರಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ,‘ಎರಡನೇ ಬೆಳೆಗೆ ನೀರು ಬಿಡದ ಸರ್ಕಾರಕ್ಕೆ ರೈತರ ಶಾಪ ಮುಟ್ಟೇ ಮುಟ್ಟುತ್ತದೆ’ ಎಂದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಸಿ.ಜೆ.ಕೃಷ್ಣಾರೆಡ್ಡಿ, ಮಾಜಿ ಸಚಿವರಾದ ಹನುಮಂತಪ್ಪ ಆಲ್ಕೋಡ್, ವೆಂಕಟರಾವ್ ನಾಡಗೌಡ, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ್, ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ, ಮಾನ್ವಿ ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ, ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿದರು.
ಮರುಳಸಿದ್ದಯ್ಯಸ್ವಾಮಿ ಗೊರೇಬಾಳ ಸಾನ್ನಿಧ್ಯ ವಹಿಸಿದ್ದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಬಿ.ವಿ.ಸುರೇಶಬಾಬು, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು, ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಶಿವಶಂಕರ್, ಮುಖಂಡರಾದ ಸಿದ್ದು ಬಂಡಿ, ರಾಜಣ್ಣ, ಬಸವರಾಜ ನಾಡಗೌಡ, ತಾಯಣ್ಣ ಬಳ್ಳಾರಿ, ಸುರೇಶ ಕೊಪ್ಪಳ, ಕೊಟ್ರೇಶ ವಿಜಯನಗರ, ಚಂದ್ರಣ್ಣ ಚಿಕ್ಕನಾಯಕನಹಳ್ಳಿ, ರಾಜು ನಾಯಕ ಕಂಪ್ಲಿ, ನರಸಿಂಹ ನಾಯಕ, ರಾಮಚಂದ್ರ ನಾಯಕ, ವೀರೇಶ ಮಲತಿಮರ, ಸುರೇಶ ಕುಡಿತಿನಿ, ದೇವೇಂದ್ರಗೌಡ, ಧರ್ಮನಗೌಡ ಮಲ್ಕಾಪುರ ಉಪಸ್ಥಿತರಿದ್ದರು. ಸುಮಿತ್ ತಡಕಲ್ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮೂಲಕ ಮನವಿ ಪತ್ರ ರವಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.