ADVERTISEMENT

ಡ್ರಗ್ಸ್ ಮಾಫಿಯಾ: ಸಚಿವ ಪ್ರಿಯಾಂಕ್ ರಾಜೀನಾಮೆ ಕೊಡಲಿ; ವೀರನಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 5:07 IST
Last Updated 17 ಜುಲೈ 2025, 5:07 IST
ವೀರನಗೌಡ ಪಾಟೀಲ್ ಲೆಕ್ಕಿಹಾಳ
ವೀರನಗೌಡ ಪಾಟೀಲ್ ಲೆಕ್ಕಿಹಾಳ   

ಸಿಂಧನೂರು: ‘ಡ್ರಗ್ಸ್ ಸಾಗಾಣಿಕೆ ಪ್ರಕರಣದಲ್ಲಿ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅವರು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ ಅವರ ಆಪ್ತರು. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ತಕ್ಷಣವೇ ಇಬ್ಬರು ರಾಜೀನಾಮೆ ಕೊಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಪಾಟೀಲ ಲೆಕ್ಕಿಹಾಳ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮಾದಕ ವಸ್ತುಗಳು ಮತ್ತು ನಿಷೇಧಿತ ಎನ್‍ರೆಕ್ಸ್ ಬಾಟಲ್‍ಗಳನ್ನು ಸಾಗಿಸುತ್ತಿದ್ದಾಗ ಮುಂಬೈ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಬಂಧಿಸಿದ್ದಾರೆ. ಮಾಫಿಯಾ ಕುರಿತು ಕರ್ನಾಟಕ ಪೊಲೀಸರಿಗೆ ಗೊತ್ತಿರಲಿಲ್ಲವೇ, ಆರೋಪಿಗಳನ್ನು ಇವರೇಕೆ ಬಂಧಿಸಿಲ್ಲ. ಇದರಲ್ಲಿ ಇನ್ನೊಬ್ಬ ಕಾಂಗ್ರೆಸ್ ಕಾರ್ಯಕರ್ತ ಭಾಗಿಯಾಗಿದ್ದು ಈ ಬಗ್ಗೆ ತುಟ್ಟಿ ಬಿಚ್ಚದ ಸಚಿವ ಪ್ರಿಯಾಂಕ್ ಖರ್ಗೆ ಡ್ರಗ್ಸ್ ಮಾಫಿಯಾದ ಹಿಂದಿರುವ ರೂವಾರಿ ಎಂಬ ಅನುಮಾನ ಮೂಡಿದೆ’ ಎಂದು ಆಪಾದಿಸಿದರು.

ADVERTISEMENT

‌‘ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆಯುತ್ತಿರುವ ಸಾವಿರಾರು ಕೋಟಿ ಲೂಟಿಗೆ ಪ್ರಿಯಾಂಕ್ ಖರ್ಗೆ ಪಾಲುದಾರರಾಗಿದ್ದು ಸಂಪುಟದಿಂದ ಮಾಡಬೇಕು. ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ ಅವರು, ‘ಉದಾಸೀನ ಮಾಡಿದರೆ ರಾಜ್ಯದಾದ್ಯಂತ ಪಕ್ಷದಿಂದ ಹೋರಾಟ ನಡೆಸಲಾಗುವುದು’ ಎಂದರು.

ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ, ತಿಂಥಿಣಿ ಮತ್ತು ನವಲಿ ಜಲಾಶಯ ನಿರ್ಮಾಣಕ್ಕೆ ಒತ್ತಾಯಿಸಿ ದೊಡ್ಡ ಮಟ್ಟದ ಹೋರಾಟ ನಡೆಸಲು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಶೀಘ್ರದಲ್ಲಿ ಚಳವಳಿ ಆರಂಭವಾಗಲಿದೆ ಎಂದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು, ತಾಲ್ಲೂಕು ಗ್ರಾಮೀಣ ಮಂಡಲದ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ, ಪ್ರಧಾನ ಕಾರ್ಯದರ್ಶಿ ಬಸವರಾಜ ಸಿದ್ರಾಂಪುರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.