ADVERTISEMENT

ಮಾನ್ವಿ: ಸರ್ಕಾರಿ ಕಚೇರಿಗಳ ಪಕ್ಕದಲ್ಲಿಯೇ ತ್ಯಾಜ್ಯ, ಸ್ವಚ್ಚತೆಗೆ ನಿರ್ಲಕ್ಷ್ಯ

ಪ್ರಜಾವಾಣಿ ವಿಶೇಷ
Published 21 ನವೆಂಬರ್ 2023, 4:58 IST
Last Updated 21 ನವೆಂಬರ್ 2023, 4:58 IST
ಮಾನ್ವಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ಕಚೇರಿ ಪಕ್ಕದಲ್ಲಿ ಘನತ್ಯಾಜ್ಯ ಸಂಗ್ರಹವಾಗಿರುವುದು
ಮಾನ್ವಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಹಾಗೂ ಕೃಷಿ ಇಲಾಖೆಯ ಕಚೇರಿ ಪಕ್ಕದಲ್ಲಿ ಘನತ್ಯಾಜ್ಯ ಸಂಗ್ರಹವಾಗಿರುವುದು   

ಮಾನ್ವಿ: ಸ್ವಚ್ಛ ಭಾರತ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಸ್ಥಳೀಯ ತಾಲ್ಲೂಕು ಪಂಚಾಯಿತಿ ಕಚೇರಿಯ ಅಕ್ಕಪಕ್ಕದ ಸ್ಥಳ ಮಲ, ಮೂತ್ರ ವಿಸರ್ಜನೆ ಹಾಗೂ ಘನ ತ್ಯಾಜ್ಯ ಸಂಗ್ರಹದ ತಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಹಾಗೂ ಕೃಷಿ ಇಲಾಖೆಯ ಕಚೇರಿಗಳ ಸಮೀಪ ಶಾಸಕರ ಕಾರ್ಯಾಲಯವೂ ಇದೆ. ಈ ಕಚೇರಿಗಳ ಮಧ್ಯದಲ್ಲಿ ಶಾಸಕರ ಕಾರ್ಯಾಲಯಕ್ಕೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಮೂಗು‌ ಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ಇದೆ. ಈ ಎರಡೂ ಕಚೇರಿಗಳ ಸುತ್ತಮುತ್ತ ದುರ್ನಾತ ಇದ್ದರೂ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಎರಡು ವರ್ಷಗಳ ಹಿಂದೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸ್ಟೆಲ್ಲಾ ವರ್ಗೀಸ್ ಅವರು ಸದರಿ ಸ್ಥಳದ ದುರ್ಬಳಕೆ ತಡೆಯಲು ಹಾಗೂ ಸ್ವಚ್ಚತೆಗಾಗಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಸಿಗಳ ನಿರ್ವಹಣೆ ಹಾಗೂ ಸ್ವಚ್ಛತೆಗೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಅವರ ವರ್ಗಾವಣೆ ನಂತರ ಬಂದ ಅಧಿಕಾರಿಗಳು ಸದರಿ ಸ್ಥಳದಲ್ಲಿ ಸಸಿಗಳ ನಿರ್ವಹಣೆ ಹಾಗೂ ಸ್ವಚ್ಚತೆ ಬಗ್ಗೆ ಗಮನಹರಿಸದ ಕಾರಣ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಸ್ಥಳೀಯ ಪುರಸಭೆ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆಗೆ ಅಗತ್ಯ ಕ್ತಮ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ.

ADVERTISEMENT
ಅಧಿಕಾರಿಗಳು ತಮ್ಮಕಚೇರಿಗಳ ಪಕ್ಕದಲ್ಲಿಯೇ ಸ್ವಚ್ಚತೆ ಬಗ್ಗೆ ನಿಷ್ಕಾಳಜಿವಹಿಸಿರುವುದು ಖಂಡನೀಯ.
-ಹನುಮಂತ ಕೋಟೆ, ಸಾಮಾಜಿಕ ಕಾರ್ಯಕರ್ತ, ಮಾನ್ವಿ
ಸ್ಥಳೀಯ ತಾ. ಪಂ ಹಾಗೂ ಕೃಷಿ ಇಲಾಖೆ ಕಚೇರಿಗಳ ಅಕ್ಕಪಕ್ಕದ ಸ್ಥಳದ ಸ್ವಚ್ಚತೆಗೆ ಕ್ರಮ ಕೈಗೊಳ್ಳಲಾಗುವುದು.
-ಮಹೇಶ, ನೈರ್ಮಲ್ಯ ನಿರೀಕ್ಷಕ, ಪುರಸಭೆ ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.