ರಾಯಚೂರು: ಪಾರ್ಸಲ್ ಊಟ, ತಿಂಡಿಗಳನ್ನು ಪಡೆಯಲುಆನ್ಲೈನ್ ಮೂಲಕ ಬಿಲ್ ಪಾವತಿ ಮಾಡುತ್ತಿರುವುದಾಗಿ ಹೋಟೆಲ್ ಮಾಲೀಕನನ್ನು ನಂಬಿಸಿ, ಯಾಮಾರಿಸಿ, ಬ್ಯಾಂಕ್ ಎಟಿಎಂ ಸಂಖ್ಯಾ ವಿವರಗಳನ್ನು ಪಡೆದು ₹90 ಸಾವಿರ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ ಘಟನೆ ತಾಲ್ಲೂಕಿನ ದೇವಸುಗೂರಿನಲ್ಲಿ ಶುಕ್ರವಾರ ನಡೆದಿದೆ.
ರವಿತೇಜ್ ಟಿಫಿನ್ ಸೆಂಟರ್ ಮಾಲೀಕ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಗಳು, 30 ಜನರಿಗೆ ಊಟ ಪಾರ್ಸಲ್ ತಂದುಕೊಂಡುವಂತೆ ತಿಳಿಸಿದ್ದಾರೆ. ಪಾರ್ಸಲ್ಗಾಗಿ ಮತ್ತೆ ಕರೆ ಮಾಡದೆ ಇದ್ದಾಗ, ಹೋಟೆಲ್ ಮಾಲೀಕರೇ ವಾಪಸ್ ಕರೆ ಮಾಡಿದ್ದಾರೆ. ಹಣವನ್ನು ಆನ್ಲೈನ್ ಮೂಲಕ ಪಾವತಿಸಬೇಕು, ಅದಕ್ಕಾಗಿ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಎಟಿಎಂ ಕಾರ್ಡ್ನ 14 ಡಿಜಿಟ್ ನಂಬರ್ ಮತ್ತು ಸಿವಿವಿ ಸಂಖ್ಯೆಯ ಭಾವಚಿತ್ರವನ್ನು ಚಿತ್ರ ಕಳುಹಿಸುವಂತೆ ಸೂಚಿಸಿದ್ದಾರೆ. ಯಾಮಾರಿದ್ದ ಹೋಟೆಲ್ ಮಾಲೀಕರು, ವಂಚನೆಗೊಳಗಾಗುತ್ತಿರುವುದು ಅರಿವಿಗೆ ಬಾರದೆ, ಅಪರಿಚಿತರು ಹೇಳಿದಂತೆ ವಿವರ ಕೊಟ್ಟಿದ್ದಾರೆ.
₹90 ಸಾವಿರ ಹಣ ಕಡಿತವಾದ ಬಗ್ಗೆ ಮೊಬೈಲ್ ಸಂದೇಶ ಬಂದಾಗಲೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ಸೂಚನೆ
‘ಜಿಲ್ಲೆಯಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಮರುಕಳಿಸುತ್ತಿರುವದರಿಂದ ಸಾರ್ವಜನಿಕರು ಎಚ್ಚೆತ್ತುಕೊಂಡು ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜನರಿಗೆ ಸೂಚನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.