ಆಂದೋಲ ಸಿದ್ಧಲಿಂಗ ಸ್ವಾಮಿ
ರಾಯಚೂರು: ‘ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಇದೆ. ಅವರು ಒಪ್ಪಿದರೆ ಶಿವಸೇನೆಗೆ ಸೇರಿಸಿಕೊಳ್ಳುತ್ತೇವೆ’ ಎಂದು ರಾಜ್ಯದಲ್ಲಿ ಶಿವಸೇನೆ ಪಕ್ಷ ಸಂಘಟನೆ ನಡೆಸಿರುವ ಪಕ್ಷದ ರಾಜ್ಯಾಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮಿ ಹೇಳಿದರು.
‘ಒಂದೇ ವೇದಿಕೆಯಲ್ಲಿ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ. ಒಪ್ಪಿದರೆ ಅವರನ್ನು ಶಿವಸೇನೆಗೆ ಸ್ವಾಗತಿಸುತ್ತೇವೆ’ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಬಿಜೆಪಿ ಹಾಗೂ ಶಿವಸೇನೆಯೂ ಹಿಂದುತ್ವ ಕೆಲಸ ಮಾಡುತ್ತೆ. ಶಿವಸೇನೆ, ಬಿಜೆಪಿ ಬೇರೆ ಅಲ್ಲ. ಎನ್ ಡಿಎ ಮೈತ್ರಿ ಕೂಟ ಕೇಂದ್ರದಲ್ಲಿ ಆಡಳಿತದಲ್ಲಿದೆ. ಹಿಂದೂಗಳ ಮತ ಒಡೆಯದಂತೆ ಸಂಘಟನೆ ಮಾಡುತ್ತೇವೆ. ಶಿವಸೇನೆ ಹಾಗೂ ಬಿಜೆಪಿ ಹೈಕಮಾಂಡ್ ಕೊಡುವ ನಿರ್ದೇಶನದಂತೆ ಕರ್ನಾಟಕದಲ್ಲಿ ಮುಂದುವರಿಯುತ್ತೇವೆ’ ಎಂದು ಹೇಳಿದರು.
‘ಕಾಂಗ್ರೆಸ್ನವರು ಆರ್ಎಸ್ಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಮೈಸಾಸುರ, ಭಸ್ಮಾಸುರ, ಮುಕಾಸುರ ಹೆಸರು ಕೇಳಿದ್ದೇವೆ. ಸರ್ಕಾರದ ಕೆಲ ಮಂತ್ರಿಗಳು, ಪ್ರತಿನಿಧಿಗಳು ತಮ್ಮ ಬಾಯಿ ಚಪಲಕ್ಕೆ ಚಪಲಾಸುರರಂತೆ ಹೊರಹೊಮ್ಮುತ್ತಿದ್ದಾರೆ’ ಎಂದು ಟೀಕಿಸಿದರು.
‘ಆರ್ಎಸ್ಎಸ್ ಬಗ್ಗೆ ಮಾತನಾಡುವ ಪ್ರಿಯಾಂಕ ಖರ್ಗೆ , ಬಿ.ಕೆ. ಹರಿಪ್ರಸಾದ್, ಸಂತೋಷ ಲಾಡ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡಿವಾಣ ಹಾಕಬೇಕು’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.