ADVERTISEMENT

‘ಸೆಪ್ಟೆಂಬರ್‌ನಿಂದ ಐಐಐಟಿ ರಾಯಚೂರು ಕ್ಲಾಸ್‌ ಆರಂಭ’

ಹೈದರಾಬಾದ್‌ ಐಐಟಿ ಸಂಸ್ಥೆಯ ನಿರ್ದೇಶಕರ ತಂಡದಿಂದ ಐಐಐಟಿ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 16:48 IST
Last Updated 29 ಜುಲೈ 2020, 16:48 IST
ಹೈದರಾಬಾದ್ ಐಐಟಿ ಸಂಸ್ಥೆಯ ನಿರ್ದೇಶಕ ಬಿ.ಎಸ್.ಮೂರ್ತಿ ಅವರ ನೇತೃತ್ವದ ತಂಡವು ರಾಯಚೂರಿನ ಐಐಐಟಿ ತಾತ್ಕಾಲಿಕ ಜಾಗ ಸರ್ಕಾರಿ ಎಂಜನಿಯರಿಂಗ್ ಕಾಲೇಜಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿತು
ಹೈದರಾಬಾದ್ ಐಐಟಿ ಸಂಸ್ಥೆಯ ನಿರ್ದೇಶಕ ಬಿ.ಎಸ್.ಮೂರ್ತಿ ಅವರ ನೇತೃತ್ವದ ತಂಡವು ರಾಯಚೂರಿನ ಐಐಐಟಿ ತಾತ್ಕಾಲಿಕ ಜಾಗ ಸರ್ಕಾರಿ ಎಂಜನಿಯರಿಂಗ್ ಕಾಲೇಜಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿತು   

ರಾಯಚೂರು: ಹೈದರಾಬಾದ್ ಐಐಟಿ ಸಂಸ್ಥೆಯ ನಿರ್ದೇಶಕ ಬಿ.ಎಸ್.ಮೂರ್ತಿ ಅವರ ನೇತೃತ್ವದ ತಂಡವು ನಗರದ ಯರಮರಸ್ ಕ್ಯಾಂಪ್‌ನಲ್ಲಿರುವ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಆರಂಭಿಸಲು ಯೋಜಿಸಿದ ತಾತ್ಕಾಲಿಕ ಐಐಟಿ ಕೇಂದ್ರ ಹಾಗೂ ತಾಲ್ಲೂಕಿನ ವಡವಾಟಿ ಗ್ರಾಮದಲ್ಲಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಮೀಸಲಿಟ್ಟಿರುವ ಸ್ಥಳವನ್ನು ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರೊಂದಿಗೆ ಐಐಐಟಿ ಕ್ಲಾಸ್ ಆರಂಭಿಸುವ ಕುರಿತು ತಂಡದ ಸದಸ್ಯರು ಚರ್ಚೆ ನಡೆಸಿದರು.

ಹೊಸ ಕ್ಯಾಂಪಸ್ ಕಟ್ಟಡ ನಿರ್ಮಾಣ ಆಗುವವರೆಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿಯೇ ಸೆಪ್ಟೆಂಬರ್‌ನಲ್ಲಿ ತಾತ್ಕಾಲಿವಾಗಿ ಕ್ಲಾಸ್ ಆರಂಭಿಸಲು ಎಲ್ಲ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳು, ವಸತಿ ನಿಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಸೆಮಿನರ್ ಹಾಲ್ ಪ್ರಾರಂಭಿಸಬೇಕು. ಐಐಐಟಿ ಕ್ಲಾಸ್‌ಗಳನ್ನು ಆನ್‌ಲೈನ್ ಮೂಲಕ ಸೆಪ್ಟಂಬರ್ ಒಂದರಿಂದ ಪ್ರಾರಂಭಿಸಲಾಗುತ್ತದೆ ಎಂದು ಸದಸ್ಯರು ತಿಳಿಸಿದರು.

ADVERTISEMENT

ಬಿ.ಎಸ್.ಮೂರ್ತಿ ಅವರು ಮಾತನಾಡಿ, ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ವೈರಸ್ ಲಾಕ್‌ಡೌನ್ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕ್ಲಾಸ್‌ಗಳಿಗೆ ಬರಲು ಇನ್ನೂ ಎರಡು ತಿಂಗಳು ತಡವಾಗಲಿದೆ. ಈ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ತಾತ್ಕಾಲಿವಾಗಿ ತರಗತಿಗಳನ್ನು ಆರಂಭಿಸಲಾಗುತ್ತದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾರ್ಗಸೂಚಿ ಅನುಸಾರ ಕ್ಲಾಸ್ ಮತ್ತು ಪ್ರವೇಶ ಪಡೆಯಲಾಗುತ್ತದೆ. ದೇಶದಲ್ಲಿರುವ ಎಲ್ಲ ಐಐಐಟಿ ಸಂಸ್ಥೆಗಳಲ್ಲಿ ಏಕಾ ಕಾಲಕ್ಕೆ ಕ್ಲಾಸ್‌ಗಳನ್ನು ಪ್ರಾರಂಭಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಮಾತನಾಡಿ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮೂರನೇ ವಿಭಾಗದಲ್ಲಿ ತಾತ್ಕಾಲಿವಾಗಿ ತರಗತಿಗಳನ್ನು ಆರಂಭಿಸಬಹುದು. ವಿದ್ಯಾರ್ಥಿಗಳಿಗೆ ವಸತಿ ನಿಲಯ, ಗ್ರಂಥಾಲಯ, ಲ್ಯಾಬ್, ಸೇರಿದಂತೆ ಎಲ್ಲ ಅಗತ್ಯ ಸೌಕರ್ಯ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಐಐಐಟಿ ಕ್ಲಾಸ್‌ಗಳನ್ನು ಆರಂಭಿಸಲಾಗುತ್ತದೆ. ಕಂಪ್ಯೂಟರ್ ಸೈನ್ಸ್, ಎಂನಿಯಯರಿಂಗ್, ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ ತರಗತಿಗಳನ್ನು ಪ್ರಾರಂಭಿಸಲು ಕೊಠಡಿಗಳು ನಿರ್ಮಾಣಗೊಂಡಿವೆ. ಕೆಲ ಸಣ್ಣಪುಟ್ಟ ಕಾಮಗಾರಿಗಳು ಬಾಕಿಯಿದ್ದು, ಅಗಸ್ಟ್ ಅಂತ್ಯದೊಳಗೆ ಎಲ್ಲವೂ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.

ಬಾಲಕರ, ಬಾಲಕಿಯರ ವಸತಿ ನಿಲಯ, ಗೆಸ್ಟ್ ಹೌಸ್ ಮತ್ತು ತರಗತಿ ಕೋಣಿಗಳನ್ನು ಪರಿಶೀಲಿಸಲಾಯಿತು. ಆನಂತರ ತಾಲ್ಲೂಕಿನ ವಡಾವಟಿ ಗ್ರಾಮದಲ್ಲಿ ಐಐಐಟಿ ಹೊಸ ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ 65 ಎಕರೆ ಜಮೀನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.

ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಹೈದರಾಬಾದ್‌ ಐಐಟಿ ತಂಡದ ಸದಸ್ಯರಾದ ಸುಬ್ರಮಣ್ಯಂ, ಶ್ರೀಷಾ, ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಆರ್.ದಿನೇಶ, ಪ್ರೊ.ರೇಣುಕಾ ಸ್ವಾಮಿ ಗವಾಯಿ, ಪ್ರೊ.ವೀರೇಶ, ಪ್ರೊ.ಶಿವಾನಂದ, ಲೋಕೋಪಯೋಗಿ ಇಲಾಖೆಯ ಇಇ ಚನ್ನಬಸಪ್ಪ, ಎಇಇ ಪ್ರಕಾಶ, ಕ್ಯಾಷುಟೆಕ್‌ನ ಶರಣಪ್ಪ ಪಟ್ಟೇದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.