ಆರ್ಟಿಪಿಎಸ್ ವಿದ್ಯುತ್ ಘಟಕ
ಶಕ್ತಿನಗರ: ‘ಆರ್ಟಿಪಿಎಸ್ಗೆ ವಿವಿಧ ಕಲ್ಲಿದ್ದಲು ಗಣಿಗಳಿಂದ ಸರಬರಾಜು ಆಗುವ ಕಲ್ಲಿದ್ದಲು ಕಳಪೆ ಗುಣಮಟ್ಟದ್ದಾಗಿದ್ದು, ಅದರಿಂದ ವಿದ್ಯುತ್ ಉತ್ಪಾದನೆಗೆ ಹೊಡೆತ ಬಿದ್ದಿದೆ’ ಎಂಬ ಮಾತು ಹರಿದಾಡುತ್ತಿದೆ.
‘ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ಟಿಪಿಎಸ್) ವಿದ್ಯುತ್ ಘಟಕಗಳಿಗೆ ದೇಶದ ವಿವಿಧ ಗಣಿಗಳಿಂದ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆಯಿಂದಲೇ ವಿದ್ಯುತ್ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆಗಳು ಹೆಚ್ಚು ಕಂಡು ಬರುತ್ತಿವೆ’ ಎನ್ನಲಾಗುತ್ತಿದೆ.
ತಾಂತ್ರಿಕ ಸಮಸ್ಯೆಯಿಂದ ಈಗಾಗಲೇ ಆರ್ಟಿಪಿಎಸ್ 2ನೇ, 4ನೇ, 8ನೇ ಹಾಗೂ ವೈಟಿಪಿಎಸ್ 2ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
‘ಕಳಪೆ ಕಲ್ಲಿದ್ದಲು ಬಳಕೆಯಿಂದ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ತಡೆಯಲು ಆರ್ಟಿಪಿಎಸ್ ಮತ್ತು ವೈಟಿಪಿಎಸ್ಗೆ ವಿದೇಶಿ ಕಲ್ಲಿದ್ದಲು ಆಮದಿಗೆ ಕರ್ನಾಟಕ ವಿದ್ಯುತ್ ನಿಗಮದ ಆಡಳಿತ ಮಂಡಳಿ ಮುಂದಾಗಿದೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುತ್ತಿದೆ’ ಎನ್ನಲಾಗಿದೆ.
ಆದರೆ, ಇದನ್ನು ತಳ್ಳಿಹಾಕಿರುವ ಆರ್ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ನಾರಾಯಣ ಗಜಕೋಶ, ‘ಸದ್ಯ ದೇಶದ ವಿವಿಧ ಗಣಿಗಳಿಂದಲೇ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಈಗಾಗಲೇ ಆರ್ಟಿಪಿಎಸ್ನಲ್ಲಿ 4 ಲಕ್ಷ ಮೆಟ್ರಿಕ್ ಟನ್ಗಳಷ್ಟು ಕಲ್ಲಿದ್ದಲು ಸಂಗ್ರಹವಿದೆ. ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಮಾತು ಸುಳ್ಳು’ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.