ADVERTISEMENT

ಭೂರಹಿತ ಸಾಗುವಳಿದಾರರಿಗೆ ಪಟ್ಟಾ ನೀಡಲು ಒತ್ತಾಯ: ಬೃಹತ್ ಪ್ರತಿಭಟನೆ

ಮಾನ್ವಿ: ಕರ್ನಾಟಕ ರೈತ ಸಂಘದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 12:59 IST
Last Updated 16 ಏಪ್ರಿಲ್ 2022, 12:59 IST
ಮಾನ್ವಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್ ಚಂದ್ರಕಾಂತ ಅವರಿಗೆ ಮನವಿ ಸಲ್ಲಿಸಿದರು
ಮಾನ್ವಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್ ಚಂದ್ರಕಾಂತ ಅವರಿಗೆ ಮನವಿ ಸಲ್ಲಿಸಿದರು   

ಮಾನ್ವಿ: ಭೂರಹಿತ ಸಾಗುವಳಿದಾರರಿಗೆ ಪಟ್ಟಾ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸರ್ಕಾರಗಳ ರೈತ ವಿರೋಧಿ ಧೋರಣೆಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಿರೇಕೊಟ್ನೇಕಲ್, ಕುರ್ಡಿ, ದದ್ದಲ್, ಚೀಕಲಪರ್ವಿ, ಮದ್ಲಾಪೂರ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಭೂರಹಿತ ಸಾಗುವಳಿ ಮಾಡುತ್ತಿರುವವರಿಗೆ ಕೂಡಲೇ ಭೂಮಿಯ ಪಟ್ಟಾ ನೀಡಬೇಕು. ಅಕ್ರಮ ಸಕ್ರಮ ಕಾಯ್ದೆ ಅವಧಿಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ತಾಲೂಕಿನ ವಿವಿಧೆಡೆ ಅರ್ಜಿ ಸಲ್ಲಿಸಿರುವ ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ನರೇಗಾ ಯೋಜನೆಯನ್ನು ನಗರಗಳಿಗೆ ವಿಸ್ತರಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗು ಭೋವಿ ಅಭಿವೃದ್ಧಿ ನಿಗಮಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಲಂಚ ನೀಡಿದವರಿಗೆ ಸೌಲಭ್ಯ ಕಲ್ಪಿಸಲಾಗುತ್ತಿರುವ ಕುರಿತು ತನಿಖೆ ಮಾಡಬೇಕು. ಚಾಗಬಾವಿ ಗ್ರಾಮದಲ್ಲಿ ಕಾಲುವೆ ಮೇಲೆ ವಾಸಿಸುತ್ತಿರುವ ಕುಟುಂಬಗಳಿಗೆ ನಿವೇಶನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಚಂದ್ರಕಾಂತ ಅವರಿಗೆ ಸಲ್ಲಿಸಲಾಯಿತು.

ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ, ಜಿಲ್ಲಾ ಅಧ್ಯಕ್ಷ ಅಶೋಕ ನಿಲೋಗಲ್, ತಾಲ್ಲೂಕು ಅಧ್ಯಕ್ಷ ವೀರೇಶನಾಯಕ, ಇತರ ಪದಾಧಿಕಾರಿಗಳಾದ ಫಕೀರಪ್ಪ ಚೀಕಲಪರ್ವಿ, ಬೈಲಪ್ಪ ಮದ್ಲಾಪೂರ, ಹುಸೇನ್ ಬಾಷಾ, ನಾಗರಾಜ ಬೊಮ್ಮನಾಳ, ಮಾರೆಪ್ಪ, ವೆಂಕಟೇಶ ನಾಯಕ, ಹುಲಿಗಪ್ಪ ಮಡಿವಾಳ, ಬಸವರಾಜ ಬಾಗಲವಾಡ, ಮಲ್ಲೇಶ ಚೀಕಲಪರ್ವಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.