ಸಾಂದರ್ಭಿಕ ಚಿತ್ರ
ಪ್ರಜಾವಾಣಿ ಚಿತ್ರ
ತುರ್ವಿಹಾಳ: ಇಲ್ಲಿಗೆ ಸಮೀಪದ ಊಮಲೂಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ಲೈನ್ಮನ್(ಪವರ್ ಮನ್) ಕೊರತೆಯಿಂದ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗಿದೆ.
‘ಊಮಲೂಟಿ ಪಂಚಾಯಿತಿ ವ್ಯಾಪ್ತಿಗೆ ಗೋರಲೂಟಿ, ಬುಕನಟ್ಟಿ, ಮುಳ್ಳೂರು, ವೀರಾಪೂರ, ಹೊಸೂರು ಗ್ರಾಮಗಳು ಒಳಪಡುತ್ತವೆ. ಈ ಭಾಗದ ರೈತರು ಕೊಳವೆ ಬಾವಿ ನೀರನ್ನು ನೆಚ್ಚಿ ಕೃಷಿ ಮಾಡುತ್ತಿದ್ದಾರೆ. ಅಲಸಂದಿ, ಮೆಕ್ಕೆಜೋಳ, ಹುರುಳಿ, ಈರುಳ್ಳಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಾರೆ.
‘ಈ ಗ್ರಾಮಗಳ ವಿದ್ಯುತ್ ಮಾರ್ಗ ನೋಡಿಕೊಳ್ಳುವ ಲೈನ್ಮನ್ ಇಲ್ಲ. ಇದರಿಂದ ಬೆಳೆದ ಬೆಳೆಗಳಿಗೆ ನೀರು ಹಾಯಿಸಲು ಆಗದೇ, ಅವು ಒಣಗುತ್ತಿವೆ’ ಎಂದು ರೈತರು ಹೇಳುತ್ತಾರೆ.
‘ 15 ಕಿ.ಮೀ ದೂರದ ತುರ್ವಿಹಾಳ ಪಟ್ಟಣದಲ್ಲಿ ವಿದ್ಯುತ್ ಉಪ ಸರಬರಾಜು ಘಟಕವಿದೆ. ತಂತಿ ತುಂಡಾದರೆ, ಲೈನ್ ಜಂಪ್ ಆದರೆ, ಕಂಬ ಬಿದ್ದರೆ, ಟಿ.ಸಿ ಸುಟ್ಟರೇ ಹೀಗೆ... ಪ್ರತಿಯೊಂದಕ್ಕೂ ಜೆಸ್ಕಾಂ ಮೇಲಧಿಕಾರಿಗಳಿಗೆ ಕರೆ ಮಾಡಿಯೇ ಸಮಸ್ಯೆ ಪರಿಹರಿಸಿಕೊಳ್ಳುವಂತಾಗಿದೆ. ಲೈನ್ಮನ್ ಇಲ್ಲದ ಕಾರಣ ದುರಸ್ತಿಗೆ ಗೋಗರೆಯುವಂತಾಗಿದೆ. ಕೂಡಲೇ ಲೈನ್ಮನ್ ನೇಮಿಸಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.
‘ವಿದ್ಯುತ್ ಪೂರೈಕೆಯಲ್ಲಿ ಸಣ್ಣ ವ್ಯತ್ಯಯವಾದರೂ ಅದನ್ನು ಸರಿಪಡಿಸುವುದಕ್ಕೆ ಮೂರು ದಿನ ಆಗುತ್ತಿದೆ. ನಾವು ಜೆಸ್ಕಾಂ ಜೆಇ ಅವರಿಗೆ ಫೋನ್ ಮಾಡಬೇಕು. ಬಳಿಕ ಅವರು ಸಿಬ್ಬಂದಿ ಕಳುಹಿಸಿ, ದುರಸ್ತಿ ಮಾಡುವಂತಾಗಿದೆ. ಇದು ಪ್ರತಿಸಲದ ಗೋಳಾಗಿದೆ’ ಎಂದು ಊಮಲೂಟಿ ಗ್ರಾಮದ ರೈತ ಮಾಬುಸುಭಾನಿ ಹೇಳುತ್ತಾರೆ.
ಲೈನ್ಮನ್ಗಳ ಕೊರತೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿರುವೆ. ಕೂಡಲೇ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆಬಸನಗೌಡ, ಜೆಇ, ವಿದ್ಯುತ್ ಸರಬರಾಜು ಉಪ ಘಟಕ, ತುರ್ವಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.