ADVERTISEMENT

‘ಕನ್ನಡ ಸಾಹಿತ್ಯ ಪೋಷಣೆ ಅಗತ್ಯ’

ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 4:40 IST
Last Updated 21 ಮಾರ್ಚ್ 2022, 4:40 IST
ಲಿಂಗಸುಗೂರಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ಪದಗ್ರಹಣ ಮತ್ತು ಕಾರ್ಯಚಟುವಟಿಕೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಉದ್ಘಾಟಿಸಿದರು
ಲಿಂಗಸುಗೂರಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ಪದಗ್ರಹಣ ಮತ್ತು ಕಾರ್ಯಚಟುವಟಿಕೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಉದ್ಘಾಟಿಸಿದರು   

ಲಿಂಗಸುಗೂರು: ‘ಕನ್ನಡ ಭಾಷೆ, ಸಂಸ್ಕೃತಿಗೆ ಐತಿಹಾಸಿಕ ಹಿನ್ನಲೆ ಹೊಂದಿದ್ದರು ಕೂಡ ನಿರೀಕ್ಷತ ಪ್ರಮಾಣದಲ್ಲಿ ವಿಸ್ತರಣೆಗೊಂಡಿಲ್ಲ. ಹೀಗಾಗಿ ಯುವ ಸಮೂಹ ಕನ್ನಡ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವ ಮೂಲಕ ಗಟ್ಟಿಗೊಳಿಸೋಣ’ ಎಂದು ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳ ಪದಗ್ರಹಣ, ಕಾರ್ಯಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಆಧುನಿಕತೆ ಭರಾಟೆಯಲ್ಲಿ ಕನ್ನಡ ಭಾಷೆ, ನೆಲ, ಜಲ ಸಂರಕ್ಷಿಸುವಲ್ಲಿ ಯುವ ಸಮೂಹ ಮುಂದಾಗುತ್ತಿಲ್ಲ. ಸಾಹಿತ್ಯ ಪರಿಷತ್ತು ಗ್ರಾಮ ಮಟ್ಟದಲ್ಲಿ ಕಾರ್ಯಚಟುವಟಿಕೆ ಆಯೋಜಿಸುವ ಮೂಲಕ ಜನಸಾಮಾನ್ಯರಲ್ಲಿ ಕನ್ನಡದ ಸ್ವಾಭಿಮಾನ ಬೆಳೆಸಲು ವಿಶೇಷ ಆಸಕ್ತಿ ವಹಿಸಬೇಕು’ ಎಂದು ಸಲಹೆ ನೀಡಿದರು.

ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ ಅವರು, ಡಾ.ಸಿ.ಬಿ ಚಿಲ್ಕಾರಾಗಿ ಅವರ ‘ತಿಗರಿ ತಿರುಗಿದ ಮ್ಯಾಲೆ’ ಕೃಷಿ ಬಿಡುಗಡೆ ಮಾಡಿದರು.

ADVERTISEMENT

ನಂತರ ಮಾತನಾಡಿದ ಮಾನಪ್ಪ ವಜ್ಜಲ ಅವರು, ‘ಕನ್ನಡ ಭಾಷೆ, ಸಾಹಿತ್ಯ ಬೆಳೆದು ನಿಲ್ಲಲು ಸಾಹಿತಿಗಳು ನೀಡಿರುವ ಕೊಡುಗೆ ಅಪಾರ. ಅಂತೆಯೆ ಹೆಚ್ಚು ಜ್ಞಾನಪೀಠ ಪ್ರಶಸ್ತಿ ತಂದುಕೊಳ್ಳಲು ಸಾಧ್ಯವಾಯಿತು. ಕನ್ನಡದ ಜ್ಞಾನ ಕಣದ ಅಭಿವೃದ್ಧಿಗೆ ಸಂಶೋಧನಾತ್ಮಕ ಲೇಖನ, ಕೃತಿಗಳು ಹೆಚ್ಚು ಬರಲಿ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಡಾ. ಶಿವಬಸಪ್ಪ ಹೆಸರೂರು, ನಿಕಟಪೂರ್ವ ಅಧ್ಯಕ್ಷ ಪ್ರೊ. ಜಿ.ವಿ ಕೆಂಚನಗುಡ್ಡ, ನೂತನ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಗೌಡೂರು, ಮಾತನಾಡಿದರು. ಸಾಹಿತಿ ಅಲ್ಲಾಗಿರಿರಾಜ ಕನಕಗಿರಿ ಕೃತಿ ಕುರಿತು ಅವಲೋಕನ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ, ಜಿಲ್ಲಾ ಗೌರವ ಕಾರ್ಯದರ್ಶಿ ಮಂಜುನಾಥ ಕಾಮಿನ್‍, ಸಾಹಿತಿ ಡಾ.ಸಿ.ಬಿ.ಚಿಲ್ಕಾರಾಗಿ, ತಾಯಪ್ಪ ಹೊಸೂರು, ಹುಸೇನಪ್ಪ ಮುಂಡರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.