
ಕವಿತಾಳ: ಸಮೀಪದ ಬಾಗಲವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮಂಜೂರಾಗಿದ್ದ 4 ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ನೆನಗುದಿಗೆ ಬಿದ್ದಿದ್ದು ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಕೆಕೆಆರ್ ಡಿಬಿ ಅಂದಾಜು ₹72 ಲಕ್ಷ ವೆಚ್ಚದಲ್ಲಿ 4 ಕೊಠಡಿಗಳ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕಾಮಗಾರಿಯನ್ನು ಕಳೆದ ಆರು ತಿಂಗಳಿಂದ ಸ್ಥಗಿತಗೊಳಿಸಿದ್ದಾರೆ.
ʼಮೇಲಿನ ಮಹಡಿಗೆ ಚಾವಣಿ ನಿರ್ಮಾಣ ಸೇರಿದಂತೆ ಗೋಡೆಗಳಿಗೆ ಪ್ಲಾಸ್ಟರಿಂಗ್, ನೆಲಹಾಸು, ಕಿಟಕಿ, ಬಾಗಿಲುಗಳ ಅಳವಡಿಕೆ, ವಿದ್ಯುತ್ ಸಂಪರ್ಕ ಕಲ್ಪಿಸುವುದು ಮತ್ತಿತರ ಕಾಮಗಾರಿ ಬಾಕಿ ಉಳಿದಿದ್ದು ಆರು ತಿಂಗಳಿಂದ ಅಧಿಕಾರಿಗಳು ಮತ್ತು ಕೆಲಸಗಾರರು ಈ ಕಡೆ ತಲೆ ಹಾಕಿಲ್ಲʼ ಎಂದು ಸ್ಥಳೀಯರು ಆರೋಪಿಸಿದರು.
ʼಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟದ ಮರುಳು ಮತ್ತು ನಿಗದಿತ ಪ್ರಮಾಣದಲ್ಲಿ ಸಿಮೆಂಟ್ ಬಳಕೆ ಮಾಡಿಲ್ಲ ಸಮರ್ಪಕ ಕ್ಯೂರಿಂಗ್ ಮಾಡದಿರುವುದರಿಂದ ಗೋಡೆ ಬಿರುಕು ಬಿಟ್ಟಿವೆ, ಇದೀಗ ಅಪೂರ್ಣ ಕಟ್ಟಡ ಕಿಡಿಗೇಡಿಗಳ ಆಶ್ರಯ ತಾಣವಾಗಿದ್ದು ಕುಡಿದು ಬಾಟಲಿಗಳನ್ನು ಬಿಸಾಡುತ್ತಿದ್ದಾರೆ, ಎಲ್ಲೆಂದರಲ್ಲಿ ಬೀಡಿ, ಸಿಗರೇಟು ತುಂಡುಗಳು, ಮದ್ಯದ ಬಾಟಲಿಗಳು ಕಂಡು ಬರುತ್ತಿವೆ, ಹೊರಗಿನವರು ಬಂದು ಗಲೀಜು ಮಾಡುತ್ತಿದ್ದು ಕೋಣೆಗಳು ಶೌಚಾಲಯದಂತಾಗಿವೆʼ ಎಂದು ಎಸ್ ಡಿ ಎಂ ಸಿ ಸದಸ್ಯ ನಾಗರಾಜ ಹಿಂದಿನಮನಿ ಆರೋಪಿಸಿದರು.
8.9 ಮತ್ತು 10ನೇ ತರಗತಿಯ 350 ವಿದ್ಯಾರ್ಥಿಗಳಿದ್ದು 12 ಕೊಠಡಿಗಳ ಪೈಕಿ 5 ಕೊಠಡಿಗಳು ಮಳೆಗೆ ಸೋರುತ್ತಿದ್ದು ಚಾವಣಿ ಸಿಮೆಂಟ್ ಉದುರುವುದರಿಂದ ಅವುಗಳನ್ನು ಬಳಕೆ ಮಾಡುತ್ತಿಲ್ಲ, ಹೊಸ ಕೊಠಡಿ ನಿರ್ಮಾಣ ಬೇಗ ಪೂರ್ಣವಾದರೆ ಅನುಕೂಲವಾಗುತ್ತದೆ ಎಂದು ಮುಖ್ಯ ಶಿಕ್ಷಕ ಸುರೇಶ ಕಂದಗಲ್ ತಿಳಿಸಿದರು.
ಅಧಿಕಾರಿಗಳ ನಿರ್ಲಕ್ಷದಿಂದ ಕಾಮಗಾರಿ ಗುಣಮಟ್ಟ ಕುಸಿದಿದೆ ಆರು ತಿಂಗಳಿಂದ ಸ್ಥಗಿತವಾಗಿದೆ ಈ ಬಗ್ಗೆ ಹಿರಿಯ ಅಧಿಕಾರಿಗಳು ಕಾಳಜಿ ವಹಿಸಬೇಕುನಾಗರಾಜ ಹಿಂದಿನಮನಿ ಬಾಗಲವಾಡ (ದಲಿತ ಸಂಘಟನೆ ಮುಖಂಡ)
ಅಧಿಕಾರಿಗಳ ವರ್ಗಾವಣೆ ಹಾಗೂ ಕೆಲವರ ಅಮಾನತಿನಿಂದ ಕಾಮಗಾರಿ ಸ್ಥಗಿತವಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದುಹನುಮಂತಪ್ಪ ಎಇಇ ನಿರ್ಮಿತಿ ಕೇಂದ್ರ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.