ಸಿರವಾರ: ‘ಭಾರತದ ಜಾನಪದ ಸಾಹಿತ್ಯ ಸಂಸ್ಕೃತಿ, ಕಲೆ, ಸಾಹಿತ್ಯ ವೈಶಿಷ್ಟ್ಯಪೂರ್ಣವಾಗಿದ್ದು, ಮರೆಯಾಗುತ್ತಿರುವ ಜಾನಪದ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು’ ಎಂದು ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಶಿವಯ್ಯ ಹಿರೇಮಠ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ‘ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ’ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ಪೂರ್ವಜ ಮಹಿಳೆಯರು ಓದು ಬರಹ ಬಾರದಿದ್ದರೂ ತಮ್ಮ ಕೆಲಸಗಳ ಮೂಲಕ ಜಾನಪದ ಹಾಡುಗಳನ್ನು ಕಟ್ಟಿ ಹಾಡುವ ಮೂಲಕ ಜಾನಪದ ಸಾಹಿತ್ಯ ಉಳಿಸಿ ಬೆಳೆಸಿ ಶ್ರೀಮಂತವಾಗಿಸಿದ್ದಾರೆ’ ಎಂದರು.
ಹಳೆಯ ಹಾಡುಗಳನ್ನು ಕಲಿಯಬೇಕು, ಸಾಹಿತ್ಯ ಓದಬೇಕು, ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಹೊಸ ಹೊಸ ಜಾನಪದ ರಚಿಸುವ ಮೂಲಕ ಮುಂದಿನ ಪೀಳಿಗೆಗೆ ಸಾಹಿತ್ಯವನ್ನು ವಿಸ್ತರಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಅತಿಥಿಗಳನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ವಿದ್ಯಾರ್ಥಿಗಳು ಜಾನಪದ ಸಾಹಿತ್ಯದ ಹಾಡುಗಳಿಗೆ ನೃತ್ಯ ಮಾಡಿದರು.
ವಿದ್ಯಾರ್ಥಿಗಳ ಹಳ್ಳಿ ಶೈಲಿಯ ಉಡುಗೆ ತೊಡುಗೆ ಕಣ್ಮನ ಸೆಳೆಯಿತು.
ಕಾಲೇಜು ಪ್ರಾಚಾರ್ಯ ಪಾಂಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಹೀರಾ, ಉಪನ್ಯಾಸಕರಾದ ಲಕ್ಷ್ಮಣ ಯಾದವ್, ರಾಜಶೇಖರ, ಹನುಮಂತ, ವಿನಯ ಶಂಕರ, ಪದ್ಮಾವತಿ, ಸುಭಾನ್ ಸಾಬ್, ಮೌನೇಶ, ಕಾಶಪ್ಪ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.