
ರಾಯಚೂರು: ‘ಸರ್ಕಾರದ ಸೌಲಭ್ಯಗಳು ಬಡಜನರು ಮತ್ತು ಬಡ ವಿದ್ಯಾರ್ಥಿಗಳಿಗೆ ದೊರೆತಾಗ ಮಾತ್ರ ಸರ್ಕಾರಗಳು ಜೀವಂತವಾಗಿರುತ್ತವೆ ಇಲ್ಲವಾದರೆ ಸರ್ಕಾರ ಸತ್ತಂತೆ’ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜು ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ 2025-26ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಲ್ಲಿಯ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಖಾಸಗಿ ಶಾಲಾ ಕಾಲೇಜಿನಲ್ಲಿ ಸರಿಸಾಟಿಯಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯಗಳನ್ನು ಪಡೆದು ಉನ್ನತ ಹುದ್ದೆಗಳಿಗೆ ಸೇರಿಕೊಳ್ಳಬೇಕು. ಈ ಮೂಲಕ ಸಮಾಜ ಸೇವೆ ಮಾಡಬೇಕು‘ ಎಂದು ಸಲಹೆ ನೀಡಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಜಲ್ದಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಳೆದ 12 ವರ್ಷಗಳಲ್ಲಿ ಶಾಸಕ ಶಿವರಾಜ ಪಾಟೀಲರ ಶ್ರಮದಿಂದ 34 ಕೊಠಡಿಗಳನ್ನು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಶಾಲೆ ಮತ್ತು ಕಾಲೇಜಿನಲ್ಲಿ ನಿರ್ಮಾಣ ಮಾಡಲಾಗಿದೆ‘ ಎಂದು ತಿಳಿಸಿದರು.
ಉಪ ನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿಯವರು ಮಾತನಾಡಿದರು. ಕಲಾವಿದರಾದ ರಾಜು , ಉಪನ್ಯಾಸಕರ ಸಂಘದ ಅಧ್ಯಕ್ಷ ನರಸಪ್ಪ ಭಂಡಾರಿ, ಕಾಲೇಜಿನ ಪ್ರಾಚಾರ್ಯ ಡಾ.ಕುಟೆಂಪ್ಪ ಗೌರಿಪುರ, ಪ್ರಮುಖರಾದ ರವೀಂದ್ರ ಬಂಡಿ, ಗೋವರ್ಧನ ರೆಡ್ಡಿ, ಶರಣಪ್ಪ ಪಾಟೀಲ, ವೀರೇಶ ಸೆರೆಗಾರ್, ಪ್ರೌಢಶಾಲೆಯ ಮುಖ್ಯಗುರು ಶ್ರೀನಿವಾಸ ಮರೆಡ್ಡಿ, ಉಪನ್ಯಾಸಕರಾದ ಚನ್ನಬಸಪ್ಪ, ರಾಣಾ, ಅನಿತಾ, ರವಿಕುಮಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.