
ಲಿಂಗಸುಗೂರು: ತಾಲ್ಲೂಕು ಕೇಂದ್ರದಲ್ಲಿ ಮಾತ್ರವಲ್ಲದೆ ಗ್ರಾ.ಪಂ ಮಟ್ಟದಲ್ಲಿ ಮನರೇಗಾ ಯೋಜನೆ ಉಳಿಸಲು ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಹೇಳಿದರು.
ಪಟ್ಟಣದಲ್ಲಿ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ಮನರೇಗಾ ಯೋಜನೆ ಉಳಿಸಿ ಆಂದೋಲನದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ರಾಮೀಣ ಭಾಗದಲ್ಲಿ ಗುಳೆ ತಪ್ಪಿಸಲು 2005ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಜಾರಿಗೆ ತರಲಾಗಿತ್ತು. ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಆತ್ಮಕ್ಕೆ ಕೇಂದ್ರ ಸರ್ಕಾರ ಕೊಡಲಿಯೇಟು ನೀಡಿದೆ. ವಿಬಿ ಜಿ–ರಾಮ–ಜಿ ಯೋಜನೆ ಜನರಿಗೆ ಉದ್ಯೋಗ ಒದಗಿಸಲಾರದು. ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೊರಿಸುತ್ತಿದೆ. ರಾಜ್ಯಗಳಿಗೆ ಸಿಗಬೇಕಾದ ಅನುದಾನ ನೀಡದೇ ಕೇಂದ್ರ ವಂಚನೆ ಮಾಡುತ್ತಿದೆ. ಮನರೇಗಾ ಯೋಜನೆ ಮರು ಜಾರಿಗಾಗಿ ತಾಲ್ಲೂಕಿನ ಎಲ್ಲಾ ಗ್ರಾ.ಪಂಗಳಲ್ಲಿ ಹೋರಾಟ ರೂಪಿಸಲಾಗುವುದು’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಮಾತನಾಡಿ, ‘ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಮಹಾತ್ಮ ಗಾಂಧೀಜಿ ಕಂಡಿದ್ದ ಕನಸನ್ನು ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರುವ ಮೂಲಕ ಯುಪಿಎ ಸರ್ಕಾರ ನನಸು ಮಾಡಿತ್ತು. 20 ವರ್ಷಗಳ ಗ್ರಾಮೀಣ ಭಾಗದ ಜನರ ಜೀವನ ಜೊತೆ ಗ್ರಾಮಗಳು ಬಹಳಷ್ಟು ಸುಧಾರಣೆ ಕಂಡಿದೆ. ಆದರೆ ಈಗಿನ ಕೇಂದ್ರ ಸರ್ಕಾರ ಯೋಜನೆ ಮೂಲ ಉದ್ದೇಶಕ್ಕೆ ಕತ್ತರಿ ಹಾಕಿ ಜನರ ದುಡಿಯುವ ಹಕ್ಕು ಕಿತ್ತಿಕೊಂಡಿದೆ. ಕೂಡಲೇ ಕೇಂದ್ರ ಸರ್ಕಾರ ವಿಬಿ ಜಿ ರಾಮ ಜಿ ಯೋಜನೆಯನ್ನು ಹಿಂಪಡೆದು ಜನರ ಜೀವನ ಸುಭದ್ರಗೊಳಿಸಿದ ಮನರೇಗಾ ಮರುಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಶಿವಣ್ಣ ನಾಯಕ ಕೋಠಾ, ಪ್ರಧಾನ ಕಾರ್ಯದರ್ಶಿ ಬಸವರಾಜ ಜೆಲ್ಲಿ, ಪದವೀಧರ ವಿಭಾಗದ ಜಿಲ್ಲಾ ಘಟಕದ ಅದ್ಯಕ್ಷ ಸಂಜೀವಪ್ಪ ಚಲುವಾದಿ, ಯುವ ಕಾಂಗ್ರೆಸ್ ಸಮಿತಿ ತಾಲ್ಲೂಕು ಅದ್ಯಕ್ಷ ಸಂತೋಷ ಸೊಪ್ಪಿಮಠ, ಮಹಿಳಾ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ದೇಸಾಯಿ, ಮುಖಂಡರಾದ ಶಿವಬಸಪ್ಪ ಹೆಸರೂರು, ರಾಜಾ ಶ್ರೀನಿವಾಸ ನಾಯಕ, ಮುದಕಪ್ಪ ವಕೀಲ, ಅಮರೇಶ ಮಡ್ಡಿ, ಅಮರೇಶ ಹಿರೇಹೆಸರೂರು, ವೆಂಕಟೇಶ ಗುತ್ತೆದಾರ, ಎಸ್.ಆರ್.ರಸೂಲ್, ಖಾಜಹುಸೇನ ಪೂಲೆವಾಲೆ, ರಮೇಶ ಗುತ್ತೆದಾರ, ಉಮೇಶ ಹುನಕುಂಟಿ, ಸಂಗಮೇಶ ನಾಯಕ, ಮೌನೇಶ ಪೂಜಾರಿ, ಅಬ್ದುಲ್ ಖದೀರ್ ಪಾನವಾಲೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.