ರಾಯಚೂರು: ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹಾಡಹಗಲೇ ಕೊಲೆಗಳಾಗುತ್ತಿವೆ. ಹುಬ್ಬಳ್ಳಿಯ ನೇಹಾ ಕೊಲೆ ಹಾಗೂ ಯಾದಗಿರಿಯಲ್ಲಿ ರೊಟ್ಟಿ ಕೇಳಿದ್ದಕ್ಕೆ ಕೊಲೆ ಮಾಡಿರುವಂತಹ ಘಟನೆ ಅತ್ಯಂತ ಖೇದಕರ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಇಂಥ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ’ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹೇಳಿದರು.
ತಾಲ್ಲೂಕಿನ ದೇವಸೂಗೂರು, ಚಂದ್ರಬಂಡ, ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,‘ದೇಶದ ರಕ್ಷಣೆ, ಭದ್ರತೆಗೆ ಮತ್ತೊಮ್ಮೆ ಬಿಜೆಪಿಗೆ ಮತ ನೀಡಿ’ ಎಂದು ಮನವಿ ಮಾಡಿದರು.
‘ಐದು ವರ್ಷಗಳಲ್ಲಿ ಭಾರತ ಮಾಲಾ ಯೋಜನೆಯಡಿ ತಂದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವುದಲ್ಲದೇ ಕ್ಷೇತ್ರ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯ ಮಾಡಲಾಗುವುದು’ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಶಾಸಕ ಡಾ.ಎಸ್.ಶಿವರಾಜ ಪಾಟೀಲ ಮಾತನಾಡಿ, ‘ಜಿ.ಕುಮಾರ ನಾಯಕರು ಈ ಜಿಲ್ಲೆಯವರಲ್ಲ. ಸ್ಥಳೀಯರಿಗೆ ದೊರಕಬೇಕಿದ್ದ ಟಿಕೆಟ್ ಅನ್ನು ಕಾಂಗ್ರೆಸ್ ಹೊರಗಿನವರಿಗೆ ನೀಡಿ ಸ್ಥಳೀಯರಿಗೆ ಅನ್ಯಾಯ ಮಾಡಿದೆ’ ಎಂದರು.
ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ, ಗ್ರಾಮಾಂತರ ಮಂಡಲ ಅಧ್ಯಕ್ಷ ಶಂಕರಗೌಡ ಮಿರ್ಜಾಪುರ, ಜೆಡಿಎಸ್ ಮುಖಂಡರಾದ ನರಸಿಂಹನಾಯಕ್ ಇಡಪನೂರು, ರವೀಂದ್ರ ಜಲ್ದಾರ್, ಕಡಗೋಲು ಆಂಜನೇಯ್ಯ , ಅಚ್ಯುತ್ರೆಡ್ಡಿ, ಶ್ರೀನಿವಾಸ ರೆಡ್ಡಿ, ಸತೀಶಕುಮಾರ, ಜಿ.ತಿಮ್ಮಾರೆಡ್ಡಿ, ಶಿವಶಂಕರ ವಕೀಲ, ರೈತ ಮೋರ್ಚಾದ ಅಧ್ಯಕ್ಷ ಸಿದ್ದನಗೌಡ ನೆಲಹಾಳ್, ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮುಕ್ತಿ, ನವೀನಕುಮಾರ ಕುರ್ಡಿ, ರಾಮನಗೌಡ ದೇವಸೂಗೂರು, ಶರಣು ಮದ್ಲಾಪುರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.