
ಲಿಂಗಸುಗೂರು: ‘ಬೇರೆ ಕಡೆಗೆ ವರ್ಗವಾಗಿದ್ದರೂ ಇಲ್ಲಿಯೇ ಟೆಂಟ್ ಹಾಕ್ತೀರಾ’ ಎಂದು ಬೆಂಗಳೂರಿನ ಲೋಕಾಯುಕ್ತ ಅಧಿಕಾರಿ ಎ.ವಿ.ಪಾಟೀಲ ಪುರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪುರಸಭೆ ಹಾಗೂ ಸಬ್ ರೆಜಿಸ್ಟ್ರಾರ್ ಕಚೇರಿಗೆ ಶುಕ್ರವಾರ ದಿಡೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಪುರಸಭೆ ಕಚೇರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಹಲವು ಕಡತಗಳ ಪರಿಶೀಲನೆ ನಡೆಸಿದರು. ಕಡತಕ್ಕೆ ಸಂಬಂಧಿಸಿದ ಪೂರಕ ಮಾಹಿತಿ ಕೇಳಿದಾಗ ಸಿಬ್ಬಂದಿ ತಡವಡಿಸಿದರು. ಇದಕ್ಕೆ ಗರಂ ಆದ ಎ.ವಿ ಪಾಟೀಲ, ‘ವರ್ಗಾವಣೆ ಆಗಿ ಆರು ತಿಂಗಳು ಆಗಿದೆ, ಅಲ್ಲಿ ತೆರಳಿ ವರದಿ ಮಾಡಿಕೊಳ್ಳಬೇಕಾಗಿತ್ತು. ಈ ಕಚೇರಿಯಲ್ಲೇ ಟೆಂಟ್ ಹಾಕಿ ಇರತ್ತೀರಾ? ಸರ್ಕಾರದ ಆದೇಶಕ್ಕೆ ಬೆಲೆಯೇ ಇಲ್ಲವಾ’ ಎಂದು ಪರಿಸರ ಅಭಿಯಂತರ ಗಿರಿಜಾ ಅವರನ್ನು ತರಾಟೆಗೆ ತೆಗೆದುಕೊಂಡರು.
ಕರ ವಸೂಲಿ, ಕಸ ವಿಲೇವಾರಿ, ಜೆಸಿಬಿ ಖರೀದಿ, ಆಟೋ ರಿಪೇರಿಯಲ್ಲಿ ಖರ್ಚು ಮಾಡಿದ ಲೆಕ್ಕಕ್ಕೆ ತಾಳೆಯಿಲ್ಲ, ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ಸಿಗುತ್ತಿಲ್ಲ ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆದಾಡುವಂತಾಗಿದೆ. ಪುರಸಭೆಯಲ್ಲಿ ಎಲ್ಲವೂ ಸರಿ ಇಲ್ಲ, ಪ್ರತಿ ಕಚೇರಿಯಲ್ಲಿ ಲೋಕಾಯುಕ್ತರ ಅಧಿಕಾರಿಗಳ ದೂರವಾಣಿ ವಿವರ ಫಲಕ ಹಾಕಬೇಕು ಎನ್ನುವ ನಿಯಮ ಇದ್ದರೂ ನೀವ್ಯಾಕೆ ಹಾಕಿಲ್ಲ. ನಿಮ್ಮ ಅವ್ಯವಹಾರದ ಬಗ್ಗೆ ಲೋಕಾಯುಕ್ತರಿಗೆ ಸಾರ್ವಜನಿಕರು ತಿಳಿಸುತ್ತಾರಾ ಎಂಬ ಭಯನಾ, ವಿವರದ ಫಲಕ ಹಾಕಬೇಕು ಎಂದು ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿನ ರಸ್ತೆಗಳನ್ನು ನೋಡಿದರೆ ಇಲ್ಲಿನ ಜನರು ಮುಗ್ಧರು ನಿಮ್ಮನ್ನು ಸುಮ್ಮನೆ ಬಿಟ್ಟಿದ್ದಾರೆ. ಕನಿಷ್ಟ ರಸ್ತೆ ವ್ಯವಸ್ಥೆ ಮಾಡದಿದ್ದರೆ ನೀವು ಯಾಕೆ ಇರಬೇಕು ಇಲ್ಲಿ ಎಂದು ಜೆಇ ಬಸವರಾಜರನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯ ಲೋಕಾಯುಕ್ತರ ಆದೇಶದ ಮೇರಿಗೆ ಕಚೇರಿಗಳಿಗೆ ಬೇಟಿ ನೀಡಿದ್ದೇನೆ, ಕಚೇರಿಯಲ್ಲಿರುವ ನ್ಯೂನತೆಗಳ ಸಂಪೂರ್ಣ ವಿವರ ಹಾಗೂ ಸಾರ್ವಜನಿಕರು ನೀಡಿರುವ ದೂರುಗಳನ್ನು ಮುಖ್ಯ ಲೋಕಾಯುಕ್ತರಿಗೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿ ಎ.ವಿ.ಪಾಟೀಲ ತಿಳಿಸಿದ್ದಾರೆ.
ರಾಯಚೂರು ಲೋಕಾಯುಕ್ತ ಅಧಿಕಾರಿ ಸತೀಶ, ಕರುಣೇಶಗೌಡ, ಶ್ರೀಕಾಂತ ಹಾಗೂ ಇನ್ನಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.