ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಪ್ಪೂರು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಸಭೆಯಲ್ಲಿ ಕೆಲವು ಯುವಕರು ಕಾಂಗ್ರೆಸ್ ಬಾವುಟ ಬೀಸಿದ್ದರಿಂದ ಗಲಾಟೆ ನಡೆದಿತ್ತು. ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಮಧ್ಯೆ ಆರೋಪ, ಪ್ರತ್ಯಾರೋಪ ಶುರುವಾಗಿವೆ.
ಈ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿದ ಬಿ.ವೈ.ವಿಜಯೇಂದ್ರ, ‘ಬಿಜೆಪಿಗೆ ಇಂತಹ ಗಲಾಟೆಗಳು ಹೊಸದೇನು ಅಲ್ಲ. ಮಸ್ಕಿಯಲ್ಲಿ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ನಮ್ಮ ಕಾರ್ಯಕರ್ತರುಈ ಬಗ್ಗೆ ತಲೆಕಡೆಸಿಕೊಂಡಿಲ್ಲ. ನಮ್ಮ ಗುರಿ ಇರುವುದು ಪ್ರತಾಪಗೌಡ ಪಾಟೀಲ ಅವರನ್ನು ಗೆಲ್ಲಿಸುವುದು. ಸೋಲು ಕಾಂಗ್ರೆಸ್ನವರಿಗೆ ಮನವರಿಕೆಯಾಗಿದೆ’ ಎಂದರು.
ಕೆಪಿಸಿಸಿ ವಕ್ತಾರ ವಸಂತಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಗ್ರಾಮದಲ್ಲಿ ಕಾಂಗ್ರೆಸ್ ಸಭೆ ಇದ್ದಾಗ ಅಲ್ಲಲ್ಲಿ ಧ್ವಜಗಳನ್ನು ಕಟ್ಟಿದ್ದರು. ಆನಂತರ ಬಿಜೆಪಿ ಸಭೆ ಇದ್ದಾಗ, ಮೊದಲಿದ್ದ ಕಾಂಗ್ರೆಸ್ ಧ್ವಜಗಳನ್ನು ತೆಗೆದುಹಾಕಿದ್ದರು. ಈ ವಿಚಾರವಾಗಿ ಪೊಲೀಸರೊಂದಿಗೆ ಚರ್ಚಿಸುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಧ್ವಜಗಳನ್ನು ಹಿಡಿದು ಬಂದಿದ್ದರು. ಇದು ಗಲಾಟೆಗೆ ಕಾರಣ. ಬಿಜೆಪಿಯವರ ತಂತ್ರಗಳು ಮಸ್ಕಿ ಕ್ಷೇತ್ರದಲ್ಲಿ ನಡೆಯುವುದಿಲ್ಲ’ ಎಂದು ತಿರುಗೇಟು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.