
ಮಸ್ಕಿ: ಎರಡನೇ ಶ್ರೀಶೈಲ ಕ್ಷೇತ್ರವೆಂದು ಖ್ಯಾತಿ ಪಡೆದ ಮಸ್ಕಿ ಪಟ್ಟಣದಲ್ಲಿ ಮಲ್ಲಯ್ಯ (ಮಲ್ಲಿಕಾರ್ಜುನ ದೇವರು) ಜಾತ್ರೆಯ ಅಂಗವಾಗಿ ಭಾನುವಾರ ಮಹಾ ರಥೋತ್ಸವ ಭಕ್ತಿಭಾವ ಹಾಗೂ ವೈಭವದಿಂದ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆಯಿಂದಲೇ ದೇವಸ್ಥಾನ ಆವರಣದಲ್ಲಿ ಭಕ್ತರ ಜಮಾವಣೆ ಹೆಚ್ಚಿದ್ದು, ಸಂಜೆಯ ವೇಳೆಗೆ ಉತ್ಸವಕ್ಕೆ ವಿಶೇಷ ಕಳೆ ಬಂದಿತು.
ಸಂಜೆ 5 ಗಂಟೆಗೆ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಅವರು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಧ್ವಜಾರೋಹಣ ನೇರವೆರಿಸಿ ರಥಕ್ಕೆ ಚಾಲನೆ ನೀಡಿದರು. ರಂಭಾಪುರಿ ಪೀಠ ಸಿಂಧನೂರು ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ನಂದವಾಡಗಿಯ ಚನ್ನಬಸವ ಸ್ವಾಮೀಜಿ, ತುರ್ವಿಹಾಳದ ಅಮರಗುಂಡ ಸ್ವಾಮೀಜಿ, ಇದ್ದರು.
ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ತಹಶೀಲ್ದಾರರ ಮಂಜುನಾಥ ಬೋಗಾವತಿ, ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಯಾದವ್, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಹಿರಿಯ ಮುಖಂಡ ಕೆ. ವೀರನಗೌಡ ಕಾರಲಕುಂಟಿ, ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಮಲ್ಲಿಕಾರ್ಜುನ ಪಾಟೀಲ,ವ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಅಧಿಕಾರಿಗಳು ಹಾಗೂ ಅನೇಕ ಮುಖಂಡರು ಇದ್ದರು.
ಬಳಿಕ ಭಕ್ತರ ಜಯಘೋಷಗಳ ನಡುವೆ ಮಹಾ ರಥವು ವೀರಭದ್ರೇಶ್ವರ ದೇವಸ್ಥಾನದವರೆಗೆ ಸಾಗಿತು. ಅಲ್ಲಿಂದ ಪುನಃ ವಾಪಸ್ ತರಲಾಯಿತು. ರಥ ಎಳೆಯುವ ವೇಳೆ ಭಕ್ತರು ಉತ್ತುತ್ತಿ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ‘ಹರ ಹರ ಮಹಾದೇವ’, ‘ಜೈ ಮಲ್ಲಯ್ಯ’ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
ರಥೋತ್ಸವಕ್ಕೂ ಮೊದಲು ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿಯನ್ನು ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಬರಲಾಯಿತು. ನಂತರ ಮಲ್ಲಿಕಾರ್ಜುನ ದೇವರ ಉತ್ಸವ ಮೂರ್ತಿಯ ಪಲ್ಲಕ್ಕಿಯನ್ನು ರಥದ ಸುತ್ತ ಐದು ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಭಕ್ತರ ಜಯಘೋಷಗಳ ಮಧ್ಯೆ ಉತ್ಸವ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.
ಭದ್ರತೆ, ಸ್ವಚ್ಛತೆ ಹಾಗೂ ಶಿಸ್ತು ಕಾಪಾಡಲು ಪೊಲೀಸ್ ಇಲಾಖೆ ಮತ್ತು ಪುರಸಭೆ ಸಿಬ್ಬಂದಿ ಸಮರ್ಪಕ ವ್ಯವಸ್ಥೆ ಮಾಡಿದ್ದರು.
ಮಸ್ಕಿಯ ಮಲ್ಲಯ್ಯ ಮಹಾರಥೋತ್ಸವವು ಭಾನುವಾರ ಅದ್ದೂರಿಯಾಗಿ ನಡೆಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.