
ಮಸ್ಕಿ: ಶಿವಯೋಗಿ ಸಿದ್ದರಾಮೇಶ್ವರರ 854ನೇ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬೆಳವಡಿ ವಡ್ಡರ ಯಲ್ಲಣ್ಣ ಜಯಂತಿ ನಿಮಿತ್ತ ಸೋಮವಾರ ಪಟ್ಟಣದಲ್ಲಿ ಭಾವಚಿತ್ರಗಳ ಅದ್ದೂರಿ ಮೆರವಣಿಗೆ ನಡೆಯಿತು. ನೂರಾರು ಮಹಿಳೆಯರು ಪೂರ್ಣ ಕುಂಭ ಹೊತ್ತು ಸಾಗಿದರು.
ಕವಿತಾಳ ರಸ್ತೆಯ ಸಿದ್ಧರಾಮೇಶ್ವರ ವೃತ್ತದಲ್ಲಿ ಚಿತ್ರದುರ್ಗ-ಬಾಗಲಕೋಟೆಯ ಭೋವಿಪೀಠದ ಇಮ್ಮುಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಇರಕಲ್ ಮಠದ ಬಸವಪ್ರಸಾದ ಶರಣರು, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಭೀಮೇಶ ನಾಯಕ ಸೇರಿದಂತೆ ಪುರಸಭೆ ಸದಸ್ಯರು, ಭೋವಿ(ವಡ್ಡರ) ಸಮಾಜದ ನೂರಾರು ಮುಖಂಡರು ಪಾಲ್ಗೊಂಡಿದ್ದರು.
ಗಾಂಧಿ ನಗರ, ಅಶೋಕ ವೃತ್ತ, ಅಗಸಿ, ದೈವದಕಟ್ಟೆ, ತೇರು ಬೀದಿ, ಕನಕವೃತ್ತದ ಮಾರ್ಗವಾಗಿ ಭ್ರಮರಾಂಬ ದೇವಸ್ಥಾನದ ಸಮೀಪದ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಕೀಲು ಕುದುರೆ ಕುಣಿತ, ಗಾರೂಡಿ ಗೊಂಬೆಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಡಿಜೆ ಹಾಡುಗಳಿಗೆ ಸಮಾಜದ ನೂರಾರು ಯುವಜನರು ನೃತ್ಯ ಮಾಡಿ ಗಮನ ಸೆಳೆದರು. ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಬೆಳವಡಿ ವಡ್ಡರ ಯಲ್ಲಣ್ಣನವರ ಪರವಾಗಿ ಜಯಘೋಷ ಹಾಕಿ ಸಂಭ್ರಮಿಸಿದರು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಂಭ್ರಮಿಸಿದರು. ವಿವಿಧೆಡೆಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಸಮಾಜದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭ್ರಮರಾಂಬ ದೇವಸ್ಥಾನದಲ್ಲಿ ಆಗಮಿಸಿದ್ದ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಿಪಿಐ ರಾಮಣ್ಣ ಜಲಗಾರ, ಪಿಎಸ್ಐ ಕೆ.ರಂಗಯ್ಯ ನೇತೃತ್ವದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.