ರಾಯಚೂರು: ನಗರದ ರಾಂಪೂರು ನೀರು ಶುದ್ಧೀಕರಣ ಘಟಕಕ್ಕೆ ಶಾಸಕ ಡಾ.ಶಿವರಾಜ ಪಾಟೀಲ ಭೇಟಿ ನೀಡಿದರು.
ನೀರು ಪರಿಶೀಲಿಸಿ ಪೌರಾಯುಕ್ತ ಗುರುಲಿಂಗಪ್ಪ ಹಾಗೂ ಇತರ ಅಧಿಕಾರಿಗಳಿಗೆ ನೀರು ಕುಡಿಯುವಂತೆ ಹೇಳಿ ಬಳಿಕ ಅವರೂ ನೀರು ಕುಡಿದರು.
ಬಳಿಕ ಮಾತನಾಡಿದ ಅವರು,‘ಶುದ್ಧ ಕುಡಿಯುವ ನೀರು ಪೂರೈಕೆಗೆ ಬೇಕಿರುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಶುದ್ದೀಕರಣ ಘಟಕದಿಂದ ಪೂರೈಕೆಯಾಗುವ ನೀರು ಕುಡಿಯಲು ಯೋಗ್ಯವಾಗಿದೆ. ಈಗಾಗಲೇ ನಗರದ ಎಲ್ಲ ವಾರ್ಡ್ಗಳಿಂದ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿಸಲಾಗುತ್ತಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ನಗರಸಭೆ ಅಧಿಕಾರಿಗಳು, ಜಲಗಾರರು ನೀರಿನ ಟ್ಯಾಂಕ್ಗಳ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ’ ಎಂದರು.
ನೀರನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಟ್ಯಾಂಕ್ಗಳ ಸ್ವಚ್ಛತೆಗೆ ಬೆಳಗಾವಿಯಿಂದ ತಂಡವನ್ನು ಕರೆಯಿಸಲಾಗಿದೆ ಎಂದು ಹೇಳಿದರು.
ಜಲಾಶಯ, ಟ್ಯಾಂಕರ್ಗಳ ಕ್ಲೋರಿನೇಷನ್ ಮಾಡುವ ಕಾರ್ಯ ನಡೆಯುತ್ತಿದೆ. ಕುಡಿಯುವ ನೀರಿಗೆ ಚರಂಡಿ ನೀರು ಸೇರುತ್ತಿರುವ ಕುರಿತು ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಡಿಯುವ ನೀರಿನ ನಿರ್ವಹಣೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವ ಕೆಲಸ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ನಗರಸಭೆ ಸದಸ್ಯ ಈ.ಶಶಿರಾಜ, ಹರೀಶ ನಾಡಗೌಡ ಹಾಗೂ ನಾಗರಾಜ ಇದ್ದರು.
ನಗರಸಭೆಯಿಂದ ಪೂರೈಕೆಯಾದ ನೀರು ಸೇವಿಸಿ ಈಚೆಗೆ 5 ಜನ ಸಾವನ್ನಪ್ಪಿದ್ದು, ಅನೇಕರು ಅಸ್ವಸ್ಥರಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಣ ಶಾಸಕ ಡಾ.ಶಿವರಾಜ ಪಾಟೀಲ ಅವರು ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.