
ಬಂದ್
ಮುದಗಲ್: ‘ತಾಲ್ಲೂಕು ಕೇಂದ್ರ ಘೋಷಣೆಗಾಗಿ ಫೆ.18ರಂದು ಮುದಗಲ್ ಬಂದ್ ಮಾಡುತ್ತೇವೆ’ ಎಂದು ತಾಲ್ಲೂಕು ಹೋರಾಟ ಸಮಿತಿ ಪದಾಧಿಕಾರಿ ಶರಣಪ್ಪ ಕಟ್ಟಿಮನಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ನಾಯಕರು ಮುದಗಲ್ ತಾಲ್ಲೂಕು ಕೇಂದ್ರ ಘೋಷಣೆ ಮಾಡುತ್ತೇವೆ. ಮುದಗಲ್ ಉತ್ಸವ, ನಿರಂತರ ಕುಡಿಯುವ ನೀರಿನ ಯೋಜನೆಗೆ ಅನುದಾನ ನೀಡುತ್ತೇವೆ ಎಂದು ಟೊಳ್ಳು ಭರವಸೆ ನೀಡಿದರು. ಅಧಿಕಾರದ ಚುಕ್ಕಾಣಿ ಹಿಡಿದರೂ, ನೀಡಿದ ಭರವಸೆ ಜಾರಿಗೆ ತರಲು ಮೀನಮೇಷ ಮಾಡುತ್ತಿದ್ದಾರೆ. ಭರವಸೆ ಈಡೇರಿಕೆಗಾಗಿ 18ರಂದು ಪ್ರಗತಿಪರ, ಕನ್ನಡಪರ, ರೈತಪರ, ದಲಿತಪರ ಸೇರಿದಂತೆ 19ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ ಮಾಡುತ್ತೇವೆ. ಪಟ್ಟಣದ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ಗೆ ಬೆಂಬಲ ನೀಡಿದ್ದು, ಶಾಂತಿಯುತವಾಗಿ ನಡೆಸಲಾಗುವುದು’ ಎಂದರು.
‘ಹೋರಾಟಕ್ಕೆ ಹಾಲಿ ಶಾಸಕ ಮಾನಪ್ಪ ವಜ್ಜಲ, ಮಾಜಿ ಶಾಸಕ ಡಿ.ಎಸ್. ಹುಲಗೇರಿ ಸೇರಿದಂತೆ ಪಟ್ಟಣದ ಹಿರಿಯರನ್ನು ಕೂಡ ಬೆಂಬಲಿಸುವಂತೆ ಅಹ್ವಾನಿಸುತ್ತೇವೆ. ಮಠಾಧೀಶರು ಆಗಮಿಸಿಲಿದ್ದಾರೆ’ ಎಂದರು.
ಕರವೇ ಮುದಗಲ್ ಹೋಬಳಿ ಘಟಕ ಅಧ್ಯಕ್ಷ ಎಸ್.ಎ.ನಹೀಂ, ಮುಖಂಡರಾದ ಮಂಜೂರ ಮಿಯಾ ಮುಜಾವರ, ರಘುವೀರ ಮೇಗಳಮನಿ, ರಹೀಂ ಷಾ ಮಕಾಂದಾರ, ಬಸವರಾಜ ಬಂಕದಮನಿ, ಸಂಜಯ ಚಲುವಾದಿ, ಹನುಮಂತ ಬಡಿಗೇರ, ರಮೇಶ ಕಂದಗಲ್, ಸಾಬು ಹುಸೇನ್, ಮಹಾಂತೇಶ ಚಟ್ಟೇರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.