ಮಸ್ಕಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ಸಂತೆಕಲ್ಲೂರಿನಲ್ಲಿ ಮೊಹರಂ ಹಬ್ಬ ಆಚರಿಸುವ ವೇಳೆ ವಿದ್ಯುತ್ ತಂತಿಗೆ ಪಂಜಾಸ್ಪರ್ಶವಾಗಿದ್ದರಿಂದ ಪಂಜಾ ಹಿಡಿದಿದ್ದ ವ್ಯಕ್ತಿ ಹಾಗೂ ಕಾಲಿಗೆ ನಮಸ್ಕರಿಸುತ್ತಿದ್ದ ಮಹಿಳೆ, ಇಬ್ಬರು ಮೃತಪಟ್ಟ ಮನಕಲಕುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಪಂಜಾ ಹಿಡಿದಿದ್ದ ಹುಸೇನಸಾಬ ದೇವರಮನಿ (50) ಹಾಗೂ ಹುಲಿಗೆಮ್ಮ (18) ಮೃತರಾದವರು.
ಮೊಹರಂ ಕೊನೆಯ ದಿನದಂದು ಮೆರವಣಿಗೆ ನಡೆಯುತ್ತಿತ್ತು. 8 ಅಡಿ ಇರುವ ಪಂಜಾ ಎತ್ತಿಕೊಂಡು ಹುಸೇನಸಾಬ ಹೆಜ್ಜೆ ಹಾಕುತ್ತಿದ್ದರು. ಮಾರ್ಗದಲ್ಲಿದ್ದ ವಿದ್ಯುತ್ ಕಂಬದಿಂದ ಹಾಯ್ದು ಹೋಗಿದ್ದ ತಂತಿಗಳು ತಗುಲಿವೆ. ಕೂಡಲೇ ಇಬ್ಬರನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಮೃತಪಟ್ಟಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿಕೊಂಡಿತು.
ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಸ್ಕಿ ಪೊಲೀಸರು ಬೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.
ಶಾಸಕ ಆರ್. ಬಸನಗೌಡ, ತಹಶೀಲ್ದಾರ್ ಕವಿತಾ ಆರ್. ಡಿಎಸ್ ಪಿ ಎಸ್. ಎಸ್. ಹುಲ್ಲೂರ, ಸರ್ಕಲ್ ಇನ್ ಸ್ಪೆಕ್ಟರ್ ದೀಪಕ್ ಬೂಸರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಬೇಟಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.